ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯ ಅಪಪ್ರಚಾರ: ಮುಸ್ಲಿಂ ಮುಖಂಡರೊಂದಿಗೆ ಪೊಲೀಸ್ ಕಮಿಷನರ್ ಸಭೆ

ಮಂಗಳೂರು: ಪ್ರವಾದಿಯವರ ಅವಹೇಳನದ ಕಾರಣ ದೇಶದ ವಿವಿಧೆಡೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ರೀತಿಯೇ ಮಂಗಳೂರಿನಲ್ಲಿಯೂ ಭಾರೀ ಪ್ರತಿಭಟನೆ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರು ಮಂಗಳೂರಿನ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಗೆ ಸೇರಿರುವ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಿ ಪೊಲೀಸ್ ಕಮಿಷನರ್ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಸಭೆಯಲ್ಲಿ ಹಾಜರಿದ್ದ ಧಾರ್ಮಿಕ ಮುಖಂಡರು ಈ ರೀತಿಯ ಪ್ರತಿಭಟನೆಯ ಯಾವುದೇ ಚಿಂತನೆ ತಮ್ಮಲ್ಲಿ ಇಲ್ಲ ಎಂದು ತಿಳಿಸಿದರು. ಅಲ್ಲದೆ ಸಭೆಯಲ್ಲಿ ಹಿಜಾಬ್, ಆಜಾನ್ ವಿವಾದದ ಸಂದರ್ಭ ಮುಸ್ಲಿಂ ಸಮುದಾಯ ಶಾಂತಿ ಕಾಪಾಡಿರುವ ಬಗ್ಗೆ ಮುಸ್ಲಿಂ ಮುಖಂಡರು ಪೊಲೀಸ್ ‌ಇಲಾಖೆಯ ಗಮನಕ್ಕೆ ತಂದರು. 


ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಯಾವುದೇ ಊಹಾಪೋಹ ವಿಚಾರಗಳಿಗೆ ಕಿವಿಗೊಡದಂತೆ ಮತ್ತು ಹಿತಾಸಕ್ತಿಪೂರಿತ ಸಂದೇಶಗಳಿಗೆ ಸ್ಪಂದಿಸಬಾರದು ಎಂದು ಮುಸ್ಲಿಂ ಮುಖಂಡರ ಸಭೆ ಕರೆಯಲಾಗಿತ್ತು. 2022ರಲ್ಲಿ ಯಾವುದೇ ದೊಡ್ಡ ಪ್ರತಿಭಟನೆ ಆಗದೆ ಇರುವುದರಿಂದ ಮಂಗಳೂರು ಧಾರ್ಮಿಕ ಮುಖಂಡರಿಂದ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸಂದೇಶ ವೈರಲ್ ಆಗುತ್ತಿರುವ ಬಗ್ಗೆ ತಿಳಿಸಿದಾಗ ಎಲ್ಲರೂ ಅಂತಹ ಯಾವುದೇ ನಿರ್ಧಾರ ಆಗಿಲ್ಲ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ ಎಂದರು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಮುಸ್ಲಿಂ ಧಾರ್ಮಿಕ ಮುಖಂಡರು, ಆಯುಕ್ತರು ಮುತುವರ್ಜಿಯಿಂದ ನಡೆಸಿದ ಸಭೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಅಹಿತಕರ ವಿಚಾರಗಳು ನಡೆದಿದ್ದು, ಇದರ ಬಗ್ಗೆ ಚರ್ಚೆ ನಡೆಯಿತು. ಈ ರೀತಿಯ ಸಭೆ ಎಲ್ಲಾ ಸಮುದಾಯದವರನ್ನು ಒಟ್ಟಿಗೆ ಸೇರಿಸಿಕೊಂಡು ಮಾಡಬೇಕಾಗಿದೆ ಎಂದು ಹೇಳಿದರು
BREAKING NEWS
Loading latest news...
Join our WhatsApp Channel Powered By : Online Pudu