
ಉಪ್ಪಿನಂಗಡಿ: ಬೆಂಕಿ ಅವಘಡದ ವೇಳೆ ಚಿನ್ನಾಭರಣ ಎಗರಿಸಿದ ಭೂಪ ಅಂದರ್
6/08/2022 11:05:00 PM
ಮಂಗಳೂರು: ಆಕಸ್ಮಿಕ ಬೆಂಕಿ ಅವಘಡದ ಸಂದರ್ಭ ಮನೆಯ ಬೀರುವಿನಲ್ಲಿಟ್ಟಿದ್ದ 2.50ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾಯನಕೆರೆ ನಿವಾಸಿ ಶಿವಪ್ರಸಾದ್(38) ಬಂಧಿತ ಆರೋಪಿ. ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮೇಲಂಗಲ್ ನಿವಾಸಿ ಆನಂದ ಮೂಲ್ಯರ ಮನೆಯಲ್ಲಿ ಮೇ 16ರಂದು ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿತ್ತು. ತಕ್ಷಣ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಅಷ್ಟರಲ್ಲಾಗಲೇ ಕಪಾಟಿನಲ್ಲಿದ್ದ ಬಟ್ಟೆ-ಬರೆಗಳು, ಉಳಿದ ಸೊತ್ತುಗಳು ಸುಟ್ಟು ನಾಶವಾಗಿತ್ತು. ಆದರೆ ದಾಖಲೆಪತ್ರ ಹಾಗೂ ಚಿನ್ನಾಭರಣಗಳಿದ್ದ ಬಾಕ್ಸ್ ಯಥಾಸ್ಥಿತಿಯಲ್ಲಿತ್ತು. ಆದರೆ ಮೇ 30ರಂದು ನೋಡಿದಾಗ ಚಿನ್ನಾಭರಣಗಳಿದ್ದ ಬಾಕ್ಸ್ ಕಾಣೆಯಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆಂಕಿ ಅವಘಡದ ಸಂದರ್ಭ ಮನೆಗೆ ಬಂದಿದ್ದವರನ್ನೇ ತನಿಖೆ ನಡೆಸಿದ್ದಾರೆ. ಆಗ ಆರೋಪಿ ಶಿವಪ್ರಸಾದ್ ತಾನೇ ಈ ಚಿನ್ನಾಭರಣಗಳನ್ನು ಕಳವುಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೆಂಕಿ ನಂದಿಸುವ ಸಂದರ್ಭ ಚಿನ್ನಾಭರಣಗಳ ಬಾಕ್ಸ್ ನೋಡಿ ಎಗರಿಸಿರುವುದಾಗಿ ಆತ ಹೇಳಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.