ಮಂಗಳೂರು: ಬಿಲ್‌ ಮಂಜೂರಿಗೆ ಲಂಚ ಪಡೆದ ಎಂಜಿನಿಯರ್‌ ಬಂಧನ

ಮಂಗಳೂರು: ಬಿಲ್‌ ಮಂಜೂರಿಗೆ ಲಂಚ ಪಡೆದ ಎಂಜಿನಿಯರ್‌ ಬಂಧನ





ಮಂಗಳೂರು ಮಹಾನಗರ ಪಾಲಿಕೆಯ ಮತ್ತೊಂದು ಮಿಕ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದೆ.



ನಗರದ ಕಾಮಗಾರಿಯೊಂದರ ಬಿಲ್‌ ಮಂಜೂರು ಮಾಡಲು ಲಂಚದ ಹಣಕ್ಕೆ ಕೈಯೊಡ್ಡುತ್ತಿದ್ದಾಗ ಎಂಜಿನಿಯರ್ ರೆಡ್ ಹ್ಯಾಂಡ್ ಆಗಿ ಬಂಧನವಾಗಿದ್ದಾರೆ.



ಬಂಧಿತ ಆರೋಪಿಯನ್ನು ಮಂಗಳೂರು ಮಹಾನಗರ ಪಾಲಿಕೆ ಎಂಜಿನಿಯರ್‌ ಅತಿಕ್ ರೆಹಮಾನ್ ಎಂದು ಗುರುತಿಸಲಾಗಿದೆ. ಈತನನ್ನು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಪೊಲೀಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.



ಗುತ್ತಿಗೆದಾರರು ಮಾಡಿರುವ ಕಾಮಗಾರಿಯೊಂದರ ಬಿಲ್‌ ಮಂಜೂರು ಮಾಡಲು 3 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ ನಡೆಸಿದೆ.



ಕೊಂಚಾಡಿ ದೇರೆಬೈಲು ಮಂದಾರಬೈಲು ಜಯಲಿಂಗಪ್ಪ ನಿರ್ವಹಿಸಿದ ಕಾಮಗಾರಿಯ ಬಿಲ್‌ ಮಂಜೂರು ಮಾಡಲು ಅತಿಕ್‌ ರೆಹಮಾನ್‌ 3 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.


ಗುರುವಾರ ಸಂಜೆ ವೇಳೆ ಲಂಚವನ್ನು ಸ್ವೀಕರಿಸುವ ವೇಳೆ ದಕ್ಷಿಣ ಕನ್ನಡ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 



ಎಸಿಬಿ ಅಧಿಕಾರಿ ಸೈಮನ್‌ ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ಕೆ. ಸಿ. ಪ್ರಕಾಶ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಗುರುರಾಜ್ ಹಾಗೂ ಶ್ಯಾಂಸುಂದರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.