-->

ಕೋಟ್ಯಂತರ ರೂ. ಸಂಭಾವನೆಯ ಪಾನ್ ಮಸಾಲಾ ಜಾಹಿರಾತನ್ನು ತಿರಸ್ಕರಿಸಿದ 'ರಾಕಿ ಬಾಯ್': ಅಭಿಮಾನಿಗಳು ಫುಲ್ ಖುಷ್!

ಕೋಟ್ಯಂತರ ರೂ. ಸಂಭಾವನೆಯ ಪಾನ್ ಮಸಾಲಾ ಜಾಹಿರಾತನ್ನು ತಿರಸ್ಕರಿಸಿದ 'ರಾಕಿ ಬಾಯ್': ಅಭಿಮಾನಿಗಳು ಫುಲ್ ಖುಷ್!

ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ವಿಶ್ವದಾದ್ಯಂತ ಎಲ್ಲರ ಗಮನ ಸೆಳೆಯುತ್ತಿರುವ ಸ್ಟಾರ್ ಯಶ್ ಇದೀಗ ಮಹತ್ವದ ನಿರ್ಧಾರದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಹು ಕೋಟಿ ರೂ. ಮೌಲ್ಯದ ಪಾನ್ ಮಸಾಲ ಜಾಹೀರಾತನ್ನು ಯಶ್ ತಿರಸ್ಕರಿಸಿದ್ದಾರೆ. ಇದನ್ನು ಸ್ವತಃ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯು ಖಚಿತಪಡಿಸಿದೆ.

ಕೆಜಿಎಫ್ ಚಾಪ್ಟರ್ - 2 ಸಿನಿಮಾ ಯಶಸ್ಸು ಪಡೆದಿರುವ ಬೆನ್ನಲ್ಲೇ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ-ಕೋಟಿ ರೂ. ಬಾಚುವ ಮೂಲಕ ರಾಕಿಂಗ್ ಸ್ಟಾರ್ ಯಶ್​ ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗವನ್ನು ತಿರುಗಿನೋಡುವಂತೆ ಮಾಡಿದ್ದಾರೆ. ಈ ನಡುವೆ ರಾಕಿಬಾಯ್ ಸಮಾಜ ಹಾಗೂ ಕೋಟ್ಯಂತರ ಅಭಿಮಾನಿಗಳ ದೃಷ್ಟಿಯಿಂದ ಒಂದು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲಾ, ನಿಜ ಜೀವನದಲ್ಲಿ ರಿಯಲ್‌ ಹೀರೋ ಎಂಬುದನ್ನು ಯಶ್ ಸಾಬೀತುಪಡಿಸಿದ್ದಾರೆ.

ದೇಶದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಪಾನ್ ಮಸಾಲ ಹಾಗೂ ಏಲಕ್ಕಿ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಅಭಿನಯಿಸಿ ಪ್ರಚಾರ ನೀಡಲು ಎಂಡಾರ್ಸ್‌ಮೆಂಟ್ ಕಂಪನಿಯು ನಟ ಯಶ್ ಗೆ ಆಫರ್​ ನೀಡಿತ್ತು. ಈ ಜಾಹೀರಾತಿಗಾಗಿ ಕೋಟ್ಯಂತರ ರೂ. ಸಂಭಾವನೆ ಕೊಡಲು ಸಹ ಪಾನ್ ಮಸಾಲ ಸಂಸ್ಥೆಯು ಮುಂದೆ ಬಂದಿತ್ತು.
ಸದ್ಯ ಈ ಜಾಹೀರಾತಿನಲ್ಲಿ ಪಾನ್ ಮಸಾಲ ಕಂಪೆನಿಯ ರಾಯಭಾರಿಯಾಗಲು ಯಶ್​ ನಿರಾಕರಿಸಿದ್ದಾರೆ ಎಂದು ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್‌ಟೈನ್‌ಮೆಂಟ್‌ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. 

ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನು ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಕೋಟ್ಯಂತರ ಮೌಲ್ಯದ ಆಫರ್‌ ಅನ್ನೇ ಯಶ್ ತಿರಸ್ಕರಿಸಿದ್ದಾರೆ. ನಟ ಯಶ್ ಸಿನಿಮಾಗಳಲ್ಲದೇ, ಅಡುಗೆ ಎಣ್ಣೆ, ಮನೆ ಕಟ್ಟುವ ಕಬ್ಬಿಣ, ಬಟ್ಟೆ ಹಾಗೂ ಸುಗಂಧ ದ್ರವ್ಯಗಳಂತಹ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇದೀಗ ಪಾನ್ ಮಸಾಲ ಜಾಹಿರಾತನ್ನು ಯಶ್ ತಿರಸ್ಕರಿಸಿರುವುದು ಅಭಿಮಾನಿಗಳಿಗೂ ಸಂತಸ ತಂದಿದೆ.

Ads on article

Advertise in articles 1

advertising articles 2

Advertise under the article