ಉಡುಪಿ: ಕಾರಿನಲ್ಲಿಯೇ ಸುಟ್ಟು ಕರಕಲಾದ ಯುವ ಜೋಡಿ; ಕಾರೂ ಸಂಪೂರ್ಣ ಭಸ್ಮ

ಉಡುಪಿ: ಕಾರು ಸಹಿತ ಪ್ರೇಮಿಗಳಿಬ್ಬರ ಮೃತದೇಹವು ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಮಂದಾರ್ತಿ ಸಮೀಪ ಹೆಗ್ಗುಂಜ್ಜೆಯಲ್ಲಿ ನಡೆದಿದೆ.

ಬೆಂಗಳೂರು ಆರ್.ಟಿ.ನಗರದ ಯಶವಂತ ಯಾದವ್(23) ಹಾಗೂ ಹೆಬ್ಬಾಳ ಚೋಳನಾಯಕನಹಳ್ಳಿ ನಿವಾಸಿ ಜ್ಯೋತಿ(23) ಮೃತಪಟ್ಟ ದುರ್ದೈವಿಗಳು. 

ನಸುಕಿನ ವೇಳೆ 3 ಗಂಟೆ ಸುಮಾರಿಗೆ ಬೆಂಕಿಯ ಕೆನ್ನಾಲಿಗೆಗೆ ಧಗಧಗನೆ ಹೊತ್ತಿ ಉರಿಯುತ್ತಿದ್ದ ಕಾರಿನಲ್ಲಿ ಜೋಡಿಗಳ ಮೃತದೇಹ ಪತ್ತೆಯಾಗಿವೆ. ಕಾರಿನೊಳಗೆ ಪೆಟ್ರೋಲ್ ಸುರಿದು ಈ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

ಮೂರು ದಿನಗಳ ಹಿಂದೆ‌ ಈ ಜೋಡಿಗೆ ಸಂಬಂಧಿಸಿದಂತೆ ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿತ್ತು.  ಯಶವಂತ ಯಾದವ್ ಹಾಗೂ ಜ್ಯೋತಿ ನಿನ್ನೆ ಮಂಗಳೂರಿಗೆ ಬಂದು ಹುಸೇನ್ ಎಂಬುವರಿಂದ ಕಾರನ್ನು ಬಾಡಿಗೆ ಪಡೆದಿದ್ದರು. ಅಲ್ಲಿಂದ ಉಡುಪಿಗೆ ತೆರಳಿದ ಜೋಡಿ ಹೆಗ್ಗುಂಜ್ಜೆಯಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿರವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ನೆರವಿನಿಂದ ಪೊಲೀಸರು ಬೆಂಕಿ ನಂದಿಸಿದ್ದು, ಅಷ್ಟರಲ್ಲಾಗಲೇ ಇಬ್ಬರೂ ಸುಟ್ಟು ಕರಕಲಾಗಿ ಹೋಗಿದ್ದರು. ಅವರು ಬಾಡಿಗೆ ಪಡೆದಿದ್ದ ಸ್ವಿಫ್ಟ್​ ಕಾರು ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಭಸ್ಮವಾಗಿದೆ. 

ಜ್ಯೋತಿ ಇಂಟರ್‌ವ್ಯೂ ಇದೆ ಎಂದು ಹೇಳಿ ಮೇ 18ರಂದು ಬೆಳಗ್ಗೆ 11.30ಕ್ಕೆ ಮನೆಯಿಂದ ಆಚೆ ಹೋಗಿದ್ದರು. ಆದರೆ ಜ್ಯೋತಿ ಮತ್ತೆ ವಾಪಸ್ ಆಗಿಲ್ಲವೆಂದು ಆಕೆಯ ತಾಯಿ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನೊಂದೆಡೆ ಯಶವಂತ್ ಯಾದವ್ ತಮ್ಮ ಮೇ 18ರಂದು ಮನೆಯಿಂದ ಟ್ಯಾಲಿ ಕ್ಲಾಸ್‌ ಇದೆ ಎಂದು ಹೇಳಿ ಮಧ್ಯಾಹ್ನ 12 ಗಂಟೆಗೆ ಹೊರ ಹೋಗಿದ್ದರು. ಬೈಕ್‌ನಲ್ಲಿ ಹೋಗಿದ್ದ ಪುತ್ರ ಮತ್ತೆ ವಾಪಸ್ ಆಗಿಲ್ಲವೆಂದು ಯಶವಂತ್ ತಂದೆ ಪಟೇಲ್ ಮುನಿಯಪ್ಪ ದೂರು ದಾಖಲಿಸಿದ್ದರು. ಇದೀಗ ಇಬ್ಬರೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಬೆಂಗಳೂರಿಗೆ ಕೊಂಡೊಯ್ಯುವ ಪ್ರಕ್ರಿಯೆ ನಡೆಯುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu