ಒಡಹುಟ್ಟಿದವನ ಮೇಲೆ ಕಿಚ್ಚಿನಿಂದ ಕಲ್ಲಿನಿಂದ ಚಚ್ಚಿ ಕೊಲೆಗೈದ ಅಣ್ಣ ಜೈಲು ಪಾಲು

ಬೆಳಗಾವಿ: ಒಡಹುಟ್ಟಿರುವ ಸಹೋದರನ ಏಳಿಗೆಯನ್ನೇ ಸಹಿಸದ ಅಣ್ಣನೊಬ್ಬ ತಮ್ಮನ ಎದೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಗೋಕಾಕ್​ ತಾಲೂಕಿನ ಶಿಂಗಳಾಪುರ ಗ್ರಾಮದಲ್ಲಿ ‌ನಡೆದಿದೆ. 

ಗೋಕಾಕ್​ ತಾಲೂಕಿನ ಶಿಂಗಳಾಪುರ ಗ್ರಾಮದ ಮಾಳಪ್ಪ ಭೀಮಪ್ಪ ಚಳಾಯಿ (33)ಕೊಲೆಯಾದ ದುರ್ದೈವಿ. ಈತನ ಅಣ್ಣ ವಾಶಪ್ಪ ಭೀಮಪ್ಪ ಚಳಾಯಿ ಕೊಲೆಗೈದಿರುವ ಆರೋಪಿ.‌

ತಮ್ಮ ಜಮೀನಿನಲ್ಲಿ ದುಡಿದು ಶ್ರೀಮಂತನಾಗುತ್ತಿರುವುದನ್ನು ಕಂಡು ಸಹಿಸದ ಅಣ್ಣ ಹೊಟ್ಟೆಕಿಚ್ಚಿನಿಂದ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ತಮ್ಮ ಊರಲ್ಲಿನ ಜಮೀನು ಅಲ್ಲದೇ, ಪ್ರಭಾಶುಗರ್ಸ್ ಒಡೆತನದ ಜಮೀನನ್ನು ಪಡೆದು ಪಾಲುದಾರಿಕೆ ಮೂಲಕ ಸಾಕಷ್ಟು ಕಷ್ಟಪಟ್ಟು ಕೃಷಿ ಕೆಲಸ ಮಾಡುತ್ತಿದ್ದ. ಇದೀಗ ಟ್ರಾಕ್ಟರ್, ಕಾರು ಖರೀದಿಸಿ ಊರಿನಲ್ಲಿ ಹೆಸರು ಗಳಿಸಿಕೊಂಡಿದ್ದನು. ಇದನ್ನು ಸಹಿಸದ ಆತನ ಅಣ್ಣ‌ ವಾಶಪ್ಪ ತಮ್ಮನ ಮೇಲೆ ಹಗೆ ಸಾಧಿಸುತ್ತಿದ್ದ. ಪರಿಣಾಮ ಆಗಾಗ ತಮ್ಮನ ಮೇಲೆ ಗಲಾಟೆ ಮಾಡುತ್ತಿದ್ದ ಎನ್ನಲಾಗುತ್ತಿದೆ. 

ಅಲ್ಲದೆ ತಮ್ಮನ ಹತ್ಯೆಗೆ ಸಂಚು ನಡೆಸಿರುವ ವಾಶಪ್ಪನು, ಮಾಳಪ್ಪನ ಎದೆಯ ಮೇಲೆ ಕಲ್ಲು ಹಾಕಿ ಬಳಿಕ ಅದೇ ಕಲ್ಲಿನಿಂದ ಚುಚ್ಚಿದ್ದಾನೆ. ಬಳಿಕ ಹಾರೆಕೋಲುಗಳ ಮೂಲಕ ಮನಸ್ಸೋಯಿಚ್ಛೆ ಎಲ್ಲೆಂದರಲ್ಲಿ ಹೊಡೆದು ಕೊಲೆಗೈದಿದ್ದಾನೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಾಶಪ್ಪನ ಮೇಲೆ ಕ್ರಮ ಕೈಗೊಳ್ಳಬೇಕು. ಜೈಲಿನಿಂದ ಬಿಡುಗಡೆ ಮಾಡಬೇಡಿ ಅವನಿಂದ ನಮಗೂ ಜೀವಬೇದರಿಕೆ ಇದೆ ಎಂದು ಹೇಳುತ್ತಿದ್ದಾರೆ.

ಪ್ರಕರಣ ಬಯಲಾಗುತ್ತಿದ್ದಂತೆ ಘಟಪ್ರಭಾ ಠಾಣಾ ಪೊಲೀಸರು ಕ್ರಮ ಕೈಗೊಂಡು ಆರೋಪಿ ವಾಶಪ್ಪನನ್ನು ಬಂಧಿಸಿದ್ದಾರೆ. ಆದರೆ ಈ ಕೊಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕಿದೆ. ಒಟ್ಟಿನಲ್ಲಿ ಒಡಹುಟ್ಟಿದ ಸಹೋದರನ ಬೆಳವಣಿಗೆ ಸಹಿಸದ ಅಣ್ಣ, ತಮ್ಮನ ಕೊಲೆಗೈದಿರುವುದು ವಿಪರ್ಯಾಸವೇ ಸರಿ.
BREAKING NEWS
Loading latest news...
Join our WhatsApp Channel Powered By : Online Pudu