ಉಪನ್ಯಾಸಕನ ಕೊಲೆಗೈದ ಪುತ್ರ ಹಾಗೂ ಆತನ ಸಹಚರರು ಅರೆಸ್ಟ್

ಯಾದಗಿರಿ: ನಗರದ ಕೊಳ್ಳೂರ(ಎಂ) ಸೀಮಾಂತರದ ದೇವದುರ್ಗಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರೋರ್ವರ ಬೈಕ್ ಅನ್ನು ತಡೆದು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ಕೊಲೆಗೆ ಸಂಚು ರೂಪಿಸಿದ್ದ ಉಪನ್ಯಾಸಕರ ಮೊದಲ ಪತ್ನಿಯ ಪುತ್ರ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಉಪನ್ಯಾಸಕ ಮಾನಪ್ಪ ಗೋಪಾಳಪುರ ಎಂಬುವರು ಹತ್ಯೆಯಾದವರು. ಅವರ ಪುತ್ರ
ಬಸಲಿಂಗಪ್ಪ(27) ಹಾಗೂ ಆತನ ಸಹಚರರಾದ ಸುರೇಶ್​ (23) ಮಾದೇಶ್​ (20) ಬಂಧಿತ ಆರೋಪಿಗಳು.

ಮೇ 12 ರಂದು ಉಪನ್ಯಾಸಕರ ಕೊಲೆ ನಡೆದಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರ ತಂಡ ಮಂಗಳವಾರ ಕೊಲೆ ಆರೋಪಿಗಳಾದ ಉಪನ್ಯಾಸಕರ ಪುತ್ರ ಬಸಲಿಂಗಪ್ಪ ಹಾಗೂ ಆತನ ಇಬ್ಬರು ಸಹಚರರನ್ನು  ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 12ರಂದು ಉಪನ್ಯಾಸಕ ಮಾನಪ್ಪ ಅವರು ಎರಡನೇ ಪತ್ನಿ ತವರು ಮನೆ ಹಯ್ಯಾಳ(ಬಿ) ಗ್ರಾಮಕ್ಕೆ ತೆರಳುತ್ತಿದ್ದರು.  ಆಗ ಅವರ ಮೊದಲನೆಯ ಪತ್ನಿ ಪುತ್ರ ಬಸಲಿಂಗಪ್ಪ ಮತ್ತು ಈತನ ಇನ್ನಿಬ್ಬರು ಸ್ನೇಹಿತರು ಸೇರಿ ಕೊಲೆ ಮಾಡಿದ್ದರು. ಮೊದಲ ಪತ್ನಿಗೆ ಮೂವರು ಮಕ್ಕಳಿದ್ದು, ಅವರನ್ನು ಉಪನ್ಯಾಸಕರು ದೂರ ಇಟ್ಟಿದ್ದರು ಎನ್ನಲಾಗುತ್ತಿದೆ. ಆರೋಪಿ ಬಸಲಿಂಗನ ಪ್ರಕಾರ ತನ್ನ ಕುಟುಂಬವನ್ನು ತಂದೆ 25 ವರ್ಷಗಳಿಂದ ದೂರವಿಟ್ಟಿದ್ದ. ಈ ಕೋಪದಿಂದ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಅಕ್ಕನ ಮದುವೆಗೆ ಬಂಗಾರ ಕೊಡುವುದಾಗಿ ಹೇಳಿ ತಂದೆ ಯಾಮಾರಿಸಿದ್ದ. ಇದರಿಂದ ನಾವು ಮುಜುಗರ ಅನುಭವಿಸಿದ್ದೆವು. ನಮ್ಮ ವಿದ್ಯಾಭ್ಯಾಸಕ್ಕಾಗಲಿ, ಜೀವನಕ್ಕಾಗಲಿ ಯಾವುದೇ ಸಹಾಯವನ್ನು ಆತ ಮಾಡಿರಲಿಲ್ಲ. ತಾಯಿಯನ್ನೂ ನಿರ್ಲಕ್ಷಿಸಿದ್ದ. ಅಲ್ಲದೇ, ಜೀವನಾಂಶವು ನೀಡಿರಲಿಲ್ಲ ಎಂದು ಪುತ್ರ ಬಸಲಿಂಗ ಹೇಳಿಕೆ ನೀಡಿದ್ದಾನೆ.
BREAKING NEWS
Loading latest news...
Join our WhatsApp Channel Powered By : Online Pudu