-->

ಮದುವೆಯಾದ 11ನೇ ದಿನಕ್ಕೆ ರಸ್ತೆ ಅಪಘಾತಕ್ಕೆ ವರ ಬಲಿ: ವಧು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಮದುವೆಯಾದ 11ನೇ ದಿನಕ್ಕೆ ರಸ್ತೆ ಅಪಘಾತಕ್ಕೆ ವರ ಬಲಿ: ವಧು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ತುರುವೇಕೆರೆ: ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ಜೋಡಿಯ ಬಾರಿನಲ್ಲಿ ದುರಂತವೊಂದು ಎದುರಾಗಿದೆ‌. ಮದುವೆಯಾದ ಹನ್ನೊಂದೇ ದಿನಕ್ಕೆ ವರ ರಸ್ತೆ ಅಪಘಾತಕ್ಕೆ ಬಲಿಯಾದರೆ, ವಧು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವಿವಾಹ ಸಂಭ್ರಮದಲ್ಲಿದ್ದ ಮನೆಯೀಗ ಶೋಕದಿಂದ ಮಡುಗಟ್ಟಿದ್ದು ಕುಟುಂಬಸ್ಥರ ಅಳಲು ಮುಗಿಲು ಮುಟ್ಟಿದೆ. 

ಅರಸೀಕೆರೆ ತಾಲೂಕಿನ ಕಾಮ್ಲಾಪುರದ ನಂಜುಂಡಯ್ಯ ಎಂಬವರ ಪುತ್ರ ಪ್ರಸನ್ನ ಹಾಗೂ ಮಂದಾರ ಎಂಬ ಯುವತಿಗೂ 10 ದಿನಗಳ ಹಿಂದೆ ವಿವಾಹ ನಡೆದಿತ್ತು. ಪ್ರಸನ್ನ ಮತ್ತು ಮಂದಾರ ಕಾಮ್ಲಾಪುರದಿಂದ ಸದ್ಯ ವಾಸವಾಗಿರುವ ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿಗೆ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಜವರಾಯನ ರೂಪದಲ್ಲಿ ಬಂದೆರಗಿದ ಲಾರಿಯೊಂದು, ನವವಿವಾಹಿತರ ಬಾಳಿಗೆ ಕೊಳ್ಳಿ ಇಟ್ಟಿದೆ.

ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಶೆಟ್ಟಿಕೆರೆ ಬಳಿ ನವವಿವಾಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದೆ. ಆದರೆ ಅಪಘಾತದ ರಭಸಕ್ಕೆ ನವವಿವಾಹಿತ ಪ್ರಸನ್ನ(27) ಮತ್ತು ಕಾರು ಚಾಲಕ ಬೆಂಗಳೂರಿನ ಕೈಗೊಂಡನಹಳ್ಳಿಯ ಚನ್ನಯ್ಯ(32) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೋರ್ವ ಸಂತೋಷ್​ ಎಂಬಾತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಪ್ರಸನ್ನನ ಪತ್ನಿ ಮಂದಾರ ಅವರು ತೀವ್ರ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕಾರು ಸಂಪೂರ್ಣ ಜಖಂಗೊಂಡಿದ್ದು, ಲಾರಿಯ ಒಂದು ಭಾಗ ನಜ್ಜುಗುಜ್ಜಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಈ ಬಗ್ಗೆ ತುರುವೇಕರೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article