ಭದ್ರಾ ಕಾಲುವೆಗೆ ಹಾರಿ ವೃದ್ಧ ದಂಪತಿ ಆತ್ಮಹತ್ಯೆ: ರಕ್ಷಿಸಲು ಹೋದ ಯುವಕನೂ ನೀರುಪಾಲು

ದಾವಣಗೆರೆ: ಜೀವನದಲ್ಲಿ ಜುಗುಪ್ಸೆಗೊಂಡಿದ್ದ ವೃದ್ಧ ದಂಪತಿಯು ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು,  ಇವರನ್ನು ರಕ್ಷಿಸಲು ಹಾರಿದ ಯುವಕನೂ ನೀರುಪಾಲಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇಗರದಹಳ್ಳಿ ಬಸಾಪುರ ಸಂಭವಿಸಿದೆ.

ವೃದ್ಧ ದಂಪತಿಯು ಚನ್ನಗಿರಿ ತಾಲೂಕಿನ ಅಂಚಿನ ಸಿದ್ದಾಪುರ ಬಳಿ ಭದ್ರಾ ಕಾಲುವೆಗೆ ಹಾರಿದ್ದಾರೆ. ಇದನ್ನು ಕಂಡ ಯುವಕನೋರ್ವನು ಅವರನ್ನು ರಕ್ಷಿಸಲು ಹಾರಿದ್ದಾನೆ. ಆದರೆ ಆತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ವೃದ್ಧ ದಂಪತಿಯ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ನೀರಿನಿಂದ ಮೇಲಕ್ಕೆತ್ತಿದ್ದಾರೆ. ಆದರೆ, ಯುವಕನಿನ್ನೂ ಪತ್ತೆಯಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ವೃದ್ಧ ದಂಪತಿ ಹಾಗೂ ಯುವಕನ ಗುರುತು ಪತ್ತೆಯಾಗಿಲ್ಲ. 

ಯುವಕನ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ‌ ಶೋಧ ಕಾರ್ಯ ನಡೆಸುತ್ತಿದ್ದಾರೆ. ದಂಪತಿಯ ಮೃತದೇಹಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.