
ಕಡಬ : ಆಟವಾಡುತ್ತಿದ್ದಾಗ ಮರದಿಂದ ಬಿದ್ದು ಬಾಲಕ ಸಾವು
3/17/2022 11:18:00 PM
ಮಂಗಳೂರು: ಆಟವಾಡುತ್ತಿದ್ದ ಸಂದರ್ಭ ಮರದಿಂದ ಬಿದ್ದು, 9ವರ್ಷದ ಬಾಲಕನೋರ್ವನು ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದಲ್ಲಿ ನಡೆದಿದೆ.
ದೋಲ್ಪಾಡಿ ಗ್ರಾಮದ ನಿವಾಸಿ ಗುಡ್ಡಪ್ಪ ಗೌಡ ಅವರ ಪುತ್ರ ಉಲ್ಲಾಸ್ ಡಿ.ಎಂ(9) ಮೃತಪಟ್ಟ ಬಾಲಕ
ಉಲ್ಲಾಸ್ ಡಿ.ಎಂ. ದೋಲ್ಪಾಡಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಎಂದಿನಂತೆ ಮಾರ್ಚ್ 17ರಂದು ಶಾಲೆಯಿಂದ ಮನೆಗೆ ಬಂದು ಆಟವಾಡುತ್ತಿದ್ದನು. ಈ ಸಂದರ್ಭ ಅವನು ಪೇರಳೆ ಮರಕ್ಕೆ ಹತ್ತಿದ್ದು, ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದಾನೆ.
ಪರಿಣಾಮ ಆತನ ತಲೆಯ ಹಿಂಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ಈ ಸಂದರ್ಭ ಆತನ ಮೂಗಿನಿಂದ ರಕ್ತ ಒಸರಲಾರಂಭಿಸಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.