
ಮಂಗಳೂರು: ನಡುಮಾರ್ಗದಲ್ಲಿ ಬಸ್ ನಿಲ್ಲಿಸಿ ಜಗಳಮಾಡಿಕೊಂಡ ನಾಲ್ವರು ಬಸ್ ಸಿಬ್ಬಂದಿ ಅರೆಸ್ಟ್
3/19/2022 09:18:00 PM
ಮಂಗಳೂರು: ಸಮಯ ಪಾಲನೆಯ ವಿಚಾರದಲ್ಲಿ 2 ಬಸ್ಗಳನ್ನು ನಡುಮಾರ್ಗದಲ್ಲಿ ಅಡ್ಡವಾಗಿಟ್ಟು ಪರಸ್ಪರ ಜಗಳ ಕಾಯ್ದು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಆರೋಪದಲ್ಲಿ ನಾಲ್ವರು ಬಸ್ ಸಿಬ್ಬಂದಿಯನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುಣರಾಜ್ ಶೆಟ್ಟಿ, ಸ್ಟೀವನ್ ನೆಲ್ಸನ್ ನೊರೊನ್ಹಾ, ಧನರಾಜ್ ಮತ್ತು ಶರತ್ ಬಂಧಿತ ಬಸ್ ಸಿಬ್ಬಂದಿ.
ಆರೋಪಿಗಳು ಶುಕ್ರವಾರ ಮಂಗಳೂರು ನಗರದ ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಎರಡು ಬಸ್ಗಳನ್ನು ಪರಸ್ಪರ ಅಡ್ಡ ಇರಿಸಿದ್ದಾರೆ. ಬಳಿಕ ಎರಡೂ ಬಸ್ ಗಳ ಚಾಲಕರು ಹಾಗೂ ನಿರ್ವಾಹಕರು ಬೈದಾಡಿಕೊಂಡು, ತಳ್ಳಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಆರೋಪಿಗಳನ್ನು ಉರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ.