Mangaluru Lock-up Death- ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್: ಪೊಲೀಸ್ ಇಲಾಖೆಗೆ ಕಳಂಕ, ಹೊರಗಿನ ಅಧಿಕಾರಿಗಳಿಂದ ಸ್ವತಂತ್ರ ತನಿಖೆಗೆ ಆಗ್ರಹ
ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್: ಪೊಲೀಸ್ ಇಲಾಖೆಗೆ ಕಳಂಕ, ಹೊರಗಿನ ಅಧಿಕಾರಿಗಳಿಂದ ಸ್ವತಂತ್ರ ತನಿಖೆಗೆ ಆಗ್ರಹ
ಮಂಗಳೂರು ಉತ್ತರ ಪೊಲೀಸ್ ಠಾಣೆಯ ಲಾಕಪ್ ನಲ್ಲಿ ರಾಜೇಶ್ ಪೂಜಾರಿ ಎಂಬ 33 ರ ಪ್ರಾಯದ ಯುವಕ ಅನುಮಾನಾಸ್ಪದವಾಗಿ ಮೃತ ಪಟ್ಟಿರುವ ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತವಾದ ಯತ್ನ ನಡೆಯುತ್ತಿದೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.
ಲಾಕಪ್ ಡೆತ್ ಎಂಬುದು ಅತಿ ಗಂಭೀರ ಘಟನೆಯಾಗಿರುವುದರಿಂದ ಈ ಪ್ರಕರಣವನ್ನು ಮಂಗಳೂರು ಕಮೀಷನರೇಟ್ ಹೊರಗಿನ ಅಧಿಕಾರಿಗಳ ತಂಡದಿಂದ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ. ಈ ಕುರಿತು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಸಲ್ಲಿಸಿದೆ.
33 ರ ಯುವಕ ಎದೆನೋವಿನಿಂದ ಏಕಾಏಕಿ ಲಾಕಪ್ ನಲ್ಲಿ ಮೃತ ಪಟ್ಟಿದ್ದಾನೆ ಎಂಬ ಪೊಲೀಸ್ ಇಲಾಖೆಯ ವಾದವನ್ನು ನಂಬಲು ಸಾಧ್ಯವಿಲ್ಲ.
ಠಾಣೆಯಲ್ಲಿ ಪೊಲೀಸರು ನೀಡಿದ ಹಿಂಸೆಯಿಂದ ಸಾವು ಸಂಭವಿಸಿರುವ ಅನುಮಾನ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.
ಪೊಲೀಸರ ವಾದದ ಪ್ರಕಾರ ಮಧ್ಯರಾತ್ರಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರಾಜೇಶ್ ನನ್ನು ಆತನ ಗೆಳೆಯನ ಜೊತೆ ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಅಂತಹ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪಗಳಿಲ್ಲದ ಬಂಧಿತರನ್ನು ಮರು ದಿವಸ ಸಾಯಂಕಾಲದವರೆಗೂ ಠಾಣೆಯಲ್ಲಿ ಕೂರಿಸುವ ಅಗತ್ಯ ಏನಿತ್ತು ? ಎಫ್ಐಆರ್ ದಾಖಲಾದದ್ದು ಯಾವಾಗ ? ವೈದ್ಯರು ನೀಡಿದ ಮಾಹಿತಿ ಪ್ರಕಾರ ಆಸ್ಪತ್ರೆಗೆ ತಲುಪುವಾಗಲೇ ರಾಜೇಶ್ ಮೃತಪಟ್ಟಿದ್ದಾಗಿ ವರದಿಯಾಗಿದೆ. ಮಂಗಳೂರು ನಗರದ ಭಾಗದಲ್ಲಿ ಇರುವ ಉತ್ತರ ಪೊಲೀಸ್ ಠಾಣೆಯಲ್ಲಿ ಹೃದಯ ನೋವಿಗೆ ಗುರಿಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಲು ಅಷ್ಟು ತಡವಾಗಲು ಕಾರಣ ಏನು ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ಇದಕ್ಕೂ ಮೊದಲು, ಈ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ರಾಜೇಶ್ ಕುಟುಂಬಿಕರು ಈಗ ಮೌನವಾಗಿರುವಂತೆ ಮಾಡಿದ ಶಕ್ತಿಗಳು ಯಾವುದು ? ಎಂಬ ಸಾಲು ಸಾಲು ಪ್ರಶ್ನೆಗಳು ಬಂದರು ಠಾಣೆಯ ಲಾಕಪ್ ಡೆತ್ ಪ್ರಕರಣದಿಂದ ಸಾರ್ವಜನಿಕರ ಮಧ್ಯೆ ಉದ್ಭವವಾಗಿದೆ.
ಈ ಮಧ್ಯೆ, ಲಾಕಪ್ ಡೆತ್ ಹಿಂದಿರುವ ಸತ್ಯವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಸುದ್ದಿ ಹರಿದಾಡುತ್ತಿದೆ. ಲಾಕಪ್ ಡೆತ್ ನಂತಹ ಗಂಭೀರ ಪ್ರಕರಣ ಪೊಲೀಸ್ ಇಲಾಖೆಗೆ ಕಳಂಕವಾಗಿದೆ.
ಈ ಎಲ್ಲಾ ಅನುಮಾನಗಳ ಕಾರಣಕ್ಕೆ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ತಂಡ ನಡೆಸುವ ಅಗತ್ಯ ಇದೆ. ಆ ಹಿನ್ನಲೆಯಲ್ಲಿ ಮಂಗಳೂರು ಕಮಿಷನರೇಟ್ ನಿಂದ ಹೊರಗಡೆಯ ಅಧಿಕಾರಿಗಳ ಸ್ವತಂತ್ರ ತಂಡಕ್ಕೆ ರಾಜೇಶ್ ಪೂಜಾರಿ ಲಾಕಪ್ ಡೆತ್ ಪ್ರಕರಣ ವರ್ಗಾಯಿಸ ಬೇಕಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಡಿವೈಎಫ್ಐ ಮಂಗಳೂರು ಪೊಲೀಸ್ ಕಮೀಷನರ್ ರಿಗೆ ನೀಡಿದ ಮನವಿಯಲ್ಲಿ ವಿನಂತಿಸಿದೆ.
ಮನವಿ ನೀಡಿದ ನಿಯೋಗದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಇದ್ದರು.