ಆಂಧ್ರಪ್ರದೇಶ: ಎರಡು ವರ್ಷದ ಮುಗುವೊಂದು ತನ್ನ ಹುಟ್ಟುಹಬ್ಬದಂದೇ ಆಕಸ್ಮಿಕವಾಗಿ ಬಿಸಿಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಮೃತಪಟ್ಟಿರುವ ಮನಕಲಕುವ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ನಡೆದಿದೆ.
ಶಿವ ಹಾಗೂ ಭಾನುಮತಿ ದಂಪತಿಯ ಪುತ್ರಿ ತೇಜಸ್ವಿ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದಳು. ಹೆತ್ತವರು ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಿ ಊಟ ಬಡಿಸಲೆಂದು ಹೋದಾಗ ಮಗು ತೇಜಸ್ವಿ ಅಡುಗೆ ಮನೆಗೆ ಹೋಗಿದ್ದಾಳೆ. ಅಡುಗೆ ಕೋಣೆಯಲ್ಲಿ ಆಟವಾಡುತ್ತಾ ಅವಳು ಕುರ್ಚಿಯನ್ನು ಹತ್ತಿ ಬಿಸಿ ಸಾಂಬಾರ್ ತುಂಬಿದ ಪಾತ್ರೆಯಲ್ಲಿ ಬಿದ್ದಳು ಎನ್ನಲಾಗಿದೆ.
ತಕ್ಷಣ ತಿರುವುರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರ ಶಿಫಾರಸ್ಸಿನ ಮೇಲೆ ಆಕೆಯನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಯಿತು. ಆದರೆ ಸುಟ್ಟ ಗಾಯಗಳಿಂದ ತೇಜಸ್ವಿ ಮೃತಪಟ್ಟಿದ್ದಾಳೆ. ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.