ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದು ಖದೀಮ ಪರಾರಿ!

ಮಂಗಳೂರು: ವಾಚ್ ಅಂಗಡಿಗೆ ದುಬಾರಿ ವಾಚ್ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ವಿಚಾರಣೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿಗೆ ದುಷ್ಕರ್ಮಿಯೋರ್ವನು ಚೂರಿಯಿಂದ ಇರಿದು  ಪರಾರಿಯಾಗಿರುವ ಘಟನೆ ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಕಾಸರಗೋಡು ಮೂಲದ ಈ ಆರೋಪಿ ನಗರದ ವಾಚ್ ಅಂಗಡಿಯೊಂದಕ್ಕೆ ನಿನ್ನೆ ಸಂಜೆ 6.15 ಸುಮಾರಿಗೆ ಆಗಮಿಸಿ ತನ್ನ ಬಳಿಯಿದ್ದ ದುಬಾರಿ ವಾಚ್ ಒಂದನ್ನು ಮಾರಾಟಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಅನುಮಾನಗೊಂಡ ಅಂಗಡಿಯವರು ಬಂದರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದರು ಠಾಣೆಯ ಪೊಲೀಸ್ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸಲು ಬಂದಿದ್ದಾರೆ. ಆಗ ಆರೋಪಿ ಹೆಡ್ ಕಾನ್ ಸ್ಟೇಬಲ್ ವಿನೋದ್ ಎಂಬವರಿಗೆ ಮಾರಕಾಯುಧದಿಂದ ಚುಚ್ಚಿ ಪರಾರಿಯಾಗಿದ್ದಾನೆ.


ತಕ್ಷಣ ಗಾಯಾಳುವನ್ನು ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ವಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಗೊಂದಲದ ಹೇಳಿಕೆಗಳು ಕೇಳಿ ಬರುತ್ತಿವೆ. ಈ ಪ್ರಕರಣದ ಬಗ್ಗೆ ಯಾವುದೇ ಅಪಪ್ರಚಾರಗಳನ್ನು ಮಾಡದಂತೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮನವಿ ಮಾಡಿದರು.

ಪ್ರಕರಣದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu