ಹೊಸೂರು: ತಾಯಿ - ಮಗಳು ನೇಣಿಗೆ ಶರಣಾಗಿ ಮೃತಪಟ್ಟ ಘಟನೆ ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡು ರಾಜ್ಯದ ಹೊಸೂರಿನ ಅಣ್ಣಾನಗರದಲ್ಲಿ ನಡೆದಿದೆ.
ಅಣ್ಣಾನಗರದ ಜೈಶಂಕರ್ ಕಾಲನಿ ನಿವಾಸಿಗಳಾದ ನೂರ್ ಜಹಾನ್ (38) ಹಾಗೂ ಪುತ್ರಿ ಮೊಸಿಂಜಾನ್ (17) ನೇಣಿಗೆ ಶರಣಾದವರು.
ನೂರ್ ಜಹಾನ್ ಪತಿ ಮೆಹಬೂಬ್ ಪಾಷ ಬಾರಂಡಪಲ್ಲಿಯಲ್ಲಿ ಇಲೆಕ್ಟ್ರಿಕ್ ಶಾಪ್ ನಡೆಸುತ್ತಿದ್ದಾರೆ. ರಾತ್ರಿ ಮೆಹಬೂಬ್ ಪಾಷಾ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭ ಅವರ ಪತ್ನಿ ನೂರ್ ಜಹಾನ್ ಹಾಗೂ ಪುತ್ರಿ ಮೊಸಿಂಜಾನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುತ್ರಿ ಮೊಸಿಂಜಾನ್ 10ನೇ ತರಗತಿವರೆಗೆ ಓದಿದ್ದು, ಕಂಪ್ಯೂಟರ್ ಕ್ಲಾಸ್ ಗೆ ಹೋಗುತ್ತಿದ್ದಳು. ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹೊಸೂರು ಪೊಲೀಸರು, ಮನೆಯ ಬಾಗಿಲು ಒಡೆದು ಒಳ ನುಗ್ಗಿ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ತನಿಖೆ ಆರಂಭವಾಗಿದ್ದು, ಇನ್ನಷ್ಟೇ ಕಾರಣ ತಿಳಿದುಬರಬೇಕಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.