ಒಂದು ವರ್ಷದ ಕಂದನೊಂದಿಗೆ ಹೆತ್ತವರೂ ವಿಷವುಂಡು ಸಾವು: ಮೂವರನ್ನೂ ಜೊತೆಯಾಗಿ ಮಣ್ಣು ಮಾಡಲು ಡೆತ್ ನೋಟ್ ನಲ್ಲಿ ಸೂಚನೆ

ಮಂಡ್ಯ: ಒಂದು ವರ್ಷದ ಕೂಸಿನೊಂದಿಗೆ ಹೆತ್ತವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ.

ರಘು (28), ತನುಶ್ರೀ (24) ಇನ್ನೂ ಲೋಕವನ್ನು ಕಣ್ಣು ಬಿಟ್ಟು ನೋಡಲಾರಂಭಿಸಿದ ಹೆತ್ತ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ದಂಪತಿ. 

ಮಂಡ್ಯ ನಗರದ ರಘು, ಗಂಗವಾಡಿಯ ತನುಶ್ರೀಯನ್ನು ಪ್ರೀತಿಸಿ ವಿವಾಹವಾಗಿದ್ದರು. 8 ದಿನಗಳ ಹಿಂದೆ ಮಗು ಹಾಗೂ ಪತಿಯೊಂದಿಗೆ ತನುಶ್ರೀ ತವರು ಮನೆಗೆ ಬಂದು ವಾಸಿಸತೊಡಗಿದ್ದರು‌. 

ಇವರು ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದರೂ,  ಕಾರಣವಿನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಆತ್ಮಹತ್ಯೆಗೂ ಮುನ್ನ ತನುಶ್ರೀ ಡೆತ್​ನೋಟ್​ ಒಂದನ್ನು ಬರೆದಿಟ್ಟಿದ್ದಾರೆ. ಅದರಲ್ಲಿ ''ನಮ್ಮ ಸಾವಿಗೆ ಯಾರೂ ಕಾರಣರಲ್ಲ, ನಾವೇ ಕಾರಣರು. ದಯವಿಟ್ಟು ನಮ್ಮನ್ನು ಕ್ಷಮಿಸಿ. ನನ್ನ ಪತಿಯ ಮೊಬೈಲ್​ಫೋನ್​ನಲ್ಲಿ ಇರುವ ನಂಬರ್​ಗಳಿಗೆ ಕರೆ ಮಾಡಿ ತಿಳಿಸಿ. ನನ್ನ ಮಗಳಿಗೆ ನಾನು ತಂದಿರುವ ಹೊಸ ಬಟ್ಟೆಯನ್ನೇ ಹಾಕಿ. ನನ್ನ ಕೊನೆಯಾಸೆಯಂತೆ ಮೂವರನ್ನೂ ಜೊತೆಯಾಗಿ ಮಣ್ಣು ಮಾಡಿ. ನಮ್ಮನ್ನು ಖುಷಿಯಿಂದ ಕಳುಹಿಸಿಕೊಡಿ. ಯಾರೂ ಜಗಳವಾಡಬೇಡಿ" ಎಂದು ಬರೆದಿದ್ದಾರೆ.

ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu