ಮಂಗಳೂರು: ದರೋಡೆ ಪ್ರಕರಣದಲ್ಲಿ ಕುಖ್ಯಾತ ಕ್ರಮಿನಲ್ ಆಕಾಶಭವನ ಶರಣ್ ಸೇರಿ ಐವರು ಅಂದರ್

ಮಂಗಳೂರು: ನಗರದ ಹೊರವಲಯದಲ್ಲಿರುವ ಚೇಳಾರು ಎಂಬಲ್ಲಿ ನಡೆದಿರುವ ವ್ಯಕ್ತಿಯೋರ್ವರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕ್ರಿಮಿನಲ್ ಸೇರಿದಂತೆ ಐವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.


ಮಂಗಳೂರಿನ ಕಾವೂರು ಆಕಾಶಭವನ ನಿವಾಸಿ ಆಕಾಶಭವನ ಶರಣ್(38), ಕಂಕನಾಡಿ ನಿವಾಸಿ
ಅನಿಲ್ ಕುಮಾರ್ ಸಾಲ್ಯಾನ್(40), ಬಜ್ಪೆ ನಿವಾಸಿ
ಸೈನಾಲ್ ಡಿ ಸೋಜಾ, ಪ್ರಾಯ(22), ಬಂಟ್ವಾಳ, ಫರಂಗಿಪೇಟೆ ನಿವಾಸಿ
ಪ್ರಸಾದ್(39),  ಜೆಪ್ಪಿನಮೊಗರು ನಿವಾಸಿ
ಚೇತನ್ ಕೊಟ್ಟಾರಿ, ಪ್ರಾಯ(35) ಬಂಧಿತ ಆರೋಪಿಗಳು.


ಆರೋಪಿಗಳು ಡಿಸೆಂಬರ್ 8ರಂದು ರಾತ್ರಿ 11.30 ಸುಮಾರಿಗೆ ನಗರದ ಹೊರವಲಯದಲ್ಲಿರುವ ಚೇಳಾರುವಿನ ನಂದಿನಿ ಸೇತುವೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ತಡೆದು ಚಾಕು ತೋರಿಸಿ ಬೆದರಿಕೆಯೊಡ್ಡಿ ಮೊಬೈಲ್ ಫೋನ್, 3 ಸಾವಿರ ರೂ. ಹಣ, ದ್ವಿಚಕ್ರ ವಾಹನವನ್ನು ದರೋಡೆಗೈದು ಅಲ್ಲಿಂದ ಪರಾರಿಯಾಗಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ತನ್ನ ಸಹಚರರೊಂದಿಗೆ ಸೇರಿ ತನ್ನ ವಿರೋಧಿ ರೌಡಿ ಶೀಟರ್ ರೋರ್ವರನ್ನು ಕೊಲೆಗೈಯ್ಯಲು ಸಂಚು ರೂಪಿಸುತ್ತಿದ್ದ. ಆದರೆ ಕೃತ್ಯ ಎಸಗಲು ಬೇಕಾಗಿ ತಮ್ಮದಲ್ಲದ ಬೇರೆಯೇ ಫೋನ್, ದ್ವಿಚಕ್ರ ವಾಹನ ಹಾಗೂ ಹಣದ ಅವಶ್ಯಕತೆಯಿದ್ದುದರಿಂದ ಈ ದರೋಡೆ ಮಾಡಲಾಗಿದೆ ಎಂದು  ಪೊಲೀಸ್ ತನಿಖೆಯಿಂದ ಬಯಲಾಗಿದೆ. 


ಪ್ರಕರಣದ ಪ್ರಮುಖ ಆರೋಪಿ ಆಕಾಶಭವನ ಶರಣ್ ಮೇಲೆ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆ ಯತ್ನ, 4 ಹಲ್ಲೆ, 1 ಪೊಕ್ಸೊ, ಎನ್ ಡಿಪಿಎಸ್ ಕಾಯ್ದೆಯಡಿ ಹಫ್ತಾ ವಸೂಲಿ, ಕಳವು ಪ್ರಕರಣಗಳು ಸೇರಿದಂತೆ ಸುಮಾರು 22 ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ. ಕಳೆದ 2 ತಿಂಗಳ ಹಿಂದೆಯಷ್ಟೇ ಈತ ಜೈಲಿನಿಂದ ಹೊರಬಂದಿದ್ದ. 


ಜೈಲಿನಿಂದ ಹೊರ ಬಂದ ಬಳಿಕ ಈತ ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ಕಡೆಗಳಲ್ಲಿ ಓಡಾಟ ಮಾಡಿಕೊಂಡು ವಾರೆಂಟ್ ಇದ್ದರೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ದರೋಡೆಗೈದಿದ್ದ ಮೊಬೈಲ್ ನ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮತ್ತೆ ಪೊಲೀಸ್ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu