-->

ಪೆಟ್ರೋಲ್ ಬೆಲೆಯೇರಿಕೆಯಿಂದ ಕುದುರೆಯೇರಿ ಪ್ರಯಾಣ ಮಾಡುತ್ತಿರುವ ಉದ್ಯಮಿ: ವಿನೂತನ ಪ್ರಯೋಗ

ಪೆಟ್ರೋಲ್ ಬೆಲೆಯೇರಿಕೆಯಿಂದ ಕುದುರೆಯೇರಿ ಪ್ರಯಾಣ ಮಾಡುತ್ತಿರುವ ಉದ್ಯಮಿ: ವಿನೂತನ ಪ್ರಯೋಗ

ವಿಜಯಪುರ: ನೂರರ ಗಡಿ ದಾಟಿರುವ ಪೆಟ್ರೋಲ್​ ದರ ಸದ್ಯಕ್ಕೆ ಇಳಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಈ​ ಬೆಲೆಯೇರಿಕೆಯಿಂದ ಕಂಗಾಲಾದ ಹಲವು ಮಂದಿ ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಬಸ್​ಗಳಲ್ಲಿ ಓಡಾಟ ಮಾಡಲು ಆರಂಭಿಸಿದ್ದಾರೆ. ಮತ್ತೂ ಕೆಲವರು ಎಲ್ಲೆಲ್ಲಿ ಪೆಟ್ರೋಲ್​ ಖರ್ಚನ್ನು ಉಳಿಸಲು ಸಾಧ್ಯವೋ, ಅಲ್ಲೆಲ್ಲಾ ಉಳಿಕೆ ಮಾಡುವ ಪ್ರಯತ್ನವನ್ನೆಲ್ಲಾ ಮಾಡಲು ಆರಂಭಿಸಿದ್ದಾರೆ. 

ಆದರೆ, ಇಲ್ಲೊಬ್ಬ ಉದ್ಯಮಿ ಮಾಡಿರುವ ಕೆಲಸವು ಎಲ್ಲರ ಗಮನವನ್ನು ಸೆಳೆದಿದೆ. ಪೆಟ್ರೋಲ್​ ದರ ಹೆಚ್ಚಾಗಿ ಪ್ರಯಾಣ ದುಬಾರಿ ಆಗಿರುವುದರಿಂದ ಇವರು ಕುದುರೆಯೊಂದನ್ನು ಖರೀದಿಸಿ ಅದರಲ್ಲೇ ಪ್ರಯಾಣ ಮಾಡಲು ಆರಂಭಿಸಿದ್ದಾರೆ. ಇದನ್ನು ಕೇಳಲು ತಮಾಷೆ ಎನಿಸಬಹುದು. ಆದರೆ, ಪೆಟ್ರೋಲ್​ ಬೆಲೆ ಓರ್ವ ಉದ್ಯಮಿ ಮೇಲೆಯೇ ಇಷ್ಟೊಂದು ಪ್ರಭಾವ ಬೀರಿರಬೇಕಾದರೆ, ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ತಮ್ಮ ತಲೆಗೆ ಬರದೇ ಇರದು. 

ವಿಜಯಪುರ ಮೂಲದ ಉದ್ಯಮಿ ಬಾಬುಲಾಲ್ ಚೌಹಾಣ್​ (49) ಎಂಬ ಉದ್ಯಮಿ ಈ ವಿನೂತನ ಐಡಿಯಾವನ್ನು ಕಾರ್ಯರೂಪಕ್ಕೆ ತಂದವರು. ಇತ್ತೀಚೆಗಷ್ಟೇ ಅವರೊಂದು ಗುಜರಾತಿ ಕುದುರೆಯನ್ನು ಖರೀದಿ ಮಾಡಿದ್ದಾರೆ. ಇದು ಕೇವಲ ಪ್ರಯಾಣಕ್ಕಾಗಿ ಮಾತ್ರವಲ್ಲ, ಬದಲಾಗಿ ದೇಹದ ಫಿಟ್​ನೆಸ್ ಗೂ ನೆರವಾಗುತ್ತದೆ ಎಂದು ಬಾಬುಲಾಲ್​ ಹೇಳಿದ್ದಾರೆ. 

ಅವರು ಪ್ರತಿ ತಿಂಗಳು ಜಿಮ್​ಗೆಂದು 4 ಸಾವಿರ ರೂ. ಖರ್ಚು ಮಾಡುತ್ತಿದ್ದರಂತೆ. ಅಲ್ಲದೆ, ಪೆಟ್ರೋಲ್​ಗೂ ಕೂಡ ಖರ್ಚಾಗುತ್ತಿತ್ತಂತೆ. ಇದೀಗ ಕುದುರೆ ಖರೀದಿಸಿರುವ ಬಾಬುಲಾಲ್​ಗೆ ಎರಡೆರಡು ಖರ್ಚು ಉಳಿಯುತ್ತಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಮಾತನಾಡಿರುವ ಅವರು ಕುದುರೆ ಸವಾರಿಯಿಂದ ದೇಹದ ಫಿಟ್​ನೆಸ್​ ಚೆನ್ನಾಗಿ ಇಟ್ಟುಕೊಳ್ಳಬಹುದು. ಅಲ್ಲದೆ, ವಾಯುಮಾಲಿನ್ಯ ಕಡಿಮೆ ಮಾಡಲು ಸಹಕಾರಿ ಆಗುತ್ತದೆ ಎಂದಿದ್ದಾರೆ. 

ಬಾಬುಲಾಲ್​ ಪ್ರತಿದಿನ ಮನೆಯಿಂದ ಕಚೇರಿಗೆ 30 ಕಿ.ಮೀ. ದೂರ ಪ್ರಯಾಣ ಮಾಡುತ್ತಾರೆ. 6 ಮಂದಿಯ ಇವರ ಕುಟುಂಬದಲ್ಲಿ ಒಂದು ಕಾರು ಮತ್ತು 4 ಬೈಕ್​ಗಳಿವೆ. ಇದೀಗ ದೇಶದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ನೂರರ ಗಡಿ ದಾಟಿರುವುದರಿಂದ, ಯಾರೊಬ್ಬರು ಬಾಬುಲಾಲ್​ ನಿರ್ಧಾರವನ್ನು ಗೇಲಿ ಮಾಡಲು ಆಗುವುದಿಲ್ಲ. ಏಕೆಂದರೆ, ಪೆಟ್ರೋಲ್​ ದರ ಹೆಚ್ಚಳದ ಬರೆ ಎಲ್ಲರಿಗೆ ತಗುಲಿರುವುದು ನೂರಕ್ಕೆ ನೂರು ಸತ್ಯ.

Ads on article

Advertise in articles 1

advertising articles 2

Advertise under the article