ಕೇರಳ ಮಾಡೆಲ್ ಗಳ ದುರಂತ ಅಂತ್ಯ ಪ್ರಕರಣ: ಸಂಸತ್ತಿನಲ್ಲೂ ಸದ್ದು, ಸಂಸದ ಸುರೇಶ್ ಗೋಪಿ ಗಂಭೀರ ಆರೋಪ

ನವದೆಹಲಿ: ಕೇರಳ ರಾಜ್ಯದಲ್ಲಿ ಸಂಭವಿಸಿರುವ ಮಾಡೆಲ್​ಗಳಿಬ್ಬರ ದುರಂತ ಅಂತ್ಯ ಪ್ರಕರಣವು ಸಂಸತ್ತಿನ ರಾಜ್ಯಸಭೆಯಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಮಾಡೆಲ್​ಗಳಿಬ್ಬರ ಮೃತ್ಯು ಅಪಘಾತದಿಂದ ನಡೆದಿರೋದಲ್ಲ ಬದಲಾಗಿ, ಅದೊಂದು ಕೊಲೆ ಎಂದು ಸಂಸದ ಸುರೇಶ್​ ಗೋಪಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. 

"ಮಾಡೆಲ್​ಗಳ ಸಾವು ಪೂರ್ವಯೋಜಿತವಾಗಿದ್ದು, ಇಬ್ಬರ ಮೇಲೆಯೂ ಅತ್ಯಾಚಾರ ಯತ್ನ ನಡೆದಿದೆ. ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾಡೆಲ್ ಗಳು ಇಬ್ಬರು ಯುವಕರ ರಕ್ಷಣೆಯನ್ನು ಪಡೆದುಕೊಂಡಿದ್ದರು. ಡ್ರಗ್ಸ್​ ವ್ಯಸನಿ ದಾಳಿಕೋರರು ಮಾಡೆಲ್​ಗಳನ್ನು ಹಿಂಬಾಲಿಸಿ ಹತ್ಯೆ ಮಾಡಿದ್ದಾರೆ" ಎಂದು ಸುರೇಶ್​ ಗೋಪಿ ರಾಜ್ಯಸಭೆಯಲ್ಲಿ ಆರೋಪ ಮಾಡಿದ್ದಾರೆ. 

ಮೇಲ್ಮನೆಯಲ್ಲಿ ನಡೆದಿರುವ ನಾರ್ಕೋಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ತಿದ್ದುಪಡಿ) ಬಿಲ್ ಮೇಲೆ ನಡೆದಿರುವ ಚರ್ಚೆಯ ವೇಳೆಗೆ ಸುರೇಶ್​ ಗೋಪಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಡ್ರಗ್ಸ್​ ಮಾಫಿಯಾ ಹಾಗೂ ಸರಕಾರಿ ಸಂಸ್ಥೆಗಳ ನಡುವೆ ಅಪವಿತ್ರ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. 

ಘಟನೆಯ ಹಿನ್ನೆಲೆ:

ಕೇರಳದ ಇಬ್ಬರು ಭರವಸೆಯ ಮಾಡೆಲ್​ಗಳು ನವೆಂಬರ್​ 1ರಂದು ಫೋರ್ಟ್​ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಮರಳು ಸಂದರ್ಭ ಕೇರಳದ ವ್ಯಟ್ಟಿಲ-ಪಲರಿವಟ್ಟಮ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ  ದುರ್ಮರಣಕ್ಕೀಡಾಗಿದ್ದರು. ಘಟನೆಯಲ್ಲಿ 2019ರ ಮಿಸ್​ ಕೇರಳ ವಿಜೇತೆ ಅಟ್ಟಿಂಗಲ್​ ಮೂಲದ ಅನ್ಸಿ ಕಬೀರ್​ (25), ತ್ರಿಸ್ಸೂರ್​ ಮೂಲದ ರನ್ನರ್​ ಅಪ್​ ಅಂಜನಾ ಶಾಜನ್​ (24) ಮತ್ತು ಕೆ.ಎ. ಮೊಹಮ್ಮದ್​ ಆಶಿಕ್​ (25) ದಾರುಣವಾಗಿ ಮೃತಪಟ್ಟಿದ್ದರು. 

ಕಾರು ಚಲಾಯಿಸಿದ್ದ ಚಾಲಕ ಅಬ್ದುಲ್​ ರೆಹಮಾನ್​ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಇನ್ನು ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್​ ನಂಬರ್​ 18 ಮಾಲಕ ರಾಯ್​ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್​ರನ್ನು ಸಂಪರ್ಕಿಸಿದ್ದಾರೆ. ರಾಯ್​ ಹಾಗೂ ಸೈಜು ಸ್ನೇಹಿತರು ಎಂದು ತಿಳಿದುಬಂದಿದೆ. 

ಅಪಘಾತದ ಬೆನ್ನಲ್ಲೇ ಸೈಜು, ರಾಯ್​ ಮತ್ತು ಹೋಟೆಲ್​ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ. ಆದರೆ, ಸೈಜು ಹೇಳಿರುವ ಪ್ರಕಾರ ಹೋಟೆಲ್​ನಿಂದ ಹೊರಟ ಮಾಡೆಲ್​ಗಳು ಮತ್ತು ಕಾರಿನ ಚಾಲಕ ಅಬ್ದುಲ್​ ರೆಹಮಾನ್​ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲು ಹಾಗೂ ಅತಿ ವೇಗವಾಗಿ ಚಾಲನೆ ಮಾಡದಂತೆ ಹೇಳಲು ಹಿಂಬಾಲಿಸಿದ್ದೆ ಎಂದು ಹೇಳಿದ್ದಾನೆ. ಆದರೆ, ಇದನ್ನು ಒಪ್ಪಲು ಪೊಲೀಸರು ತಯಾರಿಲ್ಲ. ಆ ಬಳಿಕ ಆತನನ್ನು ಬಂಧಿಸಿದ ಬಳಿಕ ಭಯಾನಕ ಸತ್ಯಗಳು ಹೊರ ಬಂದಿತ್ತು. ತನಿಖೆ ಮುಂದುವರಿದಷ್ಟು ಪ್ರಕರಣ ಇನ್ನಷ್ಟು ಜಟಿಲವಾಗುತ್ತಾ ಇನ್ನಷ್ಟು ಟ್ವಿಸ್ಟ್ ಗಳು ದೊರೆಯುತ್ತಲೇ ಇದೆ. ಇನ್ನೆಂಥ ದಿಕ್ಕನ್ನು ಪಡೆಯುತ್ತದೆ ಎಂದು ಕಾದು ನೋಡಬೇಕಷ್ಟೇ.
BREAKING NEWS
Loading latest news...
Join our WhatsApp Channel Powered By : Online Pudu