-->

ಕೆಲಸಕ್ಕೆ ಸೇರಿದ ಎಂಟೇ ದಿನಗಳಲ್ಲಿ ದುರಂತ ಅಂತ್ಯಗೊಂಡ ಯುವತಿ: ಆಕೆಗೂ ತನಗೂ ಬೆಂಕಿ ಹಚ್ಚಿ ಕುಕೃತ್ಯ ಮೆರೆದ ದಿನಗೂಲಿ ನೌಕರ

ಕೆಲಸಕ್ಕೆ ಸೇರಿದ ಎಂಟೇ ದಿನಗಳಲ್ಲಿ ದುರಂತ ಅಂತ್ಯಗೊಂಡ ಯುವತಿ: ಆಕೆಗೂ ತನಗೂ ಬೆಂಕಿ ಹಚ್ಚಿ ಕುಕೃತ್ಯ ಮೆರೆದ ದಿನಗೂಲಿ ನೌಕರ

ಕೋಯಿಕ್ಕೋಡ್​: ದಿನಗೂಲಿ ನೌಕರನೋರ್ವನು ಪಂಚಾಯತ್ ಕಚೇರಿ ಮಹಿಳಾ ಸಿಬ್ಬಂದಿಗೆ ಬೆಂಕಿ ಹಚ್ಚಿ ಕೊಲೆಗೈದು, ತಾನೂ ಬೆಂಕಿ ಹಚ್ಚಿಕೊಂಡು ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದಿದೆ. 

ಸಿಂಧೂರಿ ಅಲಿಯಾಸ್​ ಕೃಷ್ಣಪ್ರಿಯಾ (22) ಕೊಲೆಯಾದ ದುರ್ದೈವಿ. ಥಿಕ್ಕೋಡಿ ನಿವಾಸಿ ನಂದನ್​ಕುಮಾರ್​ (26) ಎಂಬಾತ ಕೃಷ್ಣಪ್ರಿಯಾಗೆ ಬೆಂಕಿಯಿಟ್ಟು ತಾನೂ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಯುವಕ.

ಬೆಂಕಿ‌ಹಚ್ಚಿಕೊಂಡು ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದ ನಂದನ್ ಕುಮಾರ್ ನನ್ನು ಕೋಯಿಕ್ಕೋಡ್​ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾನೆ. ಕೃಷ್ಣಪ್ರಿಯಾ ಕೂಡ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. 

ಸ್ನಾತಕೋತ್ತರ ಪದವಿ ವ್ಯಾಸಂಗವನ್ನು​ ಮುಗಿಸಿದ್ದ ಕೃಷ್ಣಪ್ರಿಯಾ, ಪಂಚಾಯತ್​ ಕಚೇರಿಯಲ್ಲಿ ಯೋಜನಾ ಸಹಾಯಕಿ ಹುದ್ದೆಗೆ ಕೇವಲ 8 ದಿನಗಳ ಹಿಂದಷ್ಟೇ ಸೇರಿದ್ದರು. ನಂದನ್​ಕುಮಾರ್​ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಪಂಚಾಯತ್​ ಕಚೇರಿಯ ಮುಂದೆಯೇ ಕೃಷ್ಣಪ್ರಿಯಾಗೆ ನಂದನ್​ ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ತಕ್ಷಣ ಪಂಚಾಯತ್​ ಕಚೇರಿಯ ಸಿಬ್ಬಂದಿ ಗೋವಿಂದನ್ ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿ, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಕೃಷ್ಣಪ್ರಿಯಾ ನಾನು ಇಟ್ಟಿರುವ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ನಂದನ್​ ಈ ಕೃತ್ಯ ಎಸಗಿದ್ದಾನೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಘಟನೆಗೆ ನಿಖರ ಕಾರಣ ಏನೆಂದು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article