
ಮತ್ತೋರ್ವಳನ್ನು ವಿವಾಹವಾಗಲೆಂದು ಮಡದಿ ಮಕ್ಕಳನ್ನು ಕೊಂದು ತಲೆಮರೆಸಿಕೊಂಡಿದ್ದ ವಿಚಾರಣಾಧೀನ ಕೈದಿ 11 ವರ್ಷಗಳ ಬಳಿಕ ಪೊಲೀಸರ ವಶಕ್ಕೆ
Monday, December 6, 2021
ಬೆಂಗಳೂರು: ಮತ್ತೋರ್ವಳನ್ನು ವಿವಾಹವಾಗಲೆಂದು ಕಟ್ಟಿಕೊಂಡ ಮಡದಿ ಹಾಗೂ ಮಕ್ಕಳನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ವಿಚಾರಣಾಧೀನ ಕೈದಿ 11 ವರ್ಷಗಳ ಬಳಿಕ ಪೊಲೀಸರ ಕೈಸೆರೆಯಾಗಿದ್ದಾನೆ.
ಹರಿಯಾಣ ಮೂಲದ ಆರೋಪಿ ಧರ್ಮಸಿಂಗ್ ಯಾದವ್(53) ಬೆಂಗಳೂರಿನಲ್ಲಿ ಕೃತ್ಯವೆಸಗಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಈತನನ್ನು ಕರ್ನಾಟಕ ಪೊಲೀಸರು ಅಸ್ಸಾಮ್ನಲ್ಲಿ ಬಂಧಿಸಿದ್ದಾರೆ. 1987ರಿಂದ ವಾಯುಸೇನೆಯಲ್ಲಿ ಜವಾನನಾಗಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ ಕೋಲ್ಕತ, ದೆಹಲಿ, ಬೆಂಗಳೂರು, ವಡೋದರ ಮುಂತಾದೆಡೆ ವೃತ್ತಿ ನಿರ್ವಹಿಸುತ್ತಿದ್ದ. ನಿವೃತ್ತಿ ಬಳಿಕ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸ್ವಂತ ಮನೆ ನಿರ್ಮಿಸಿ ಸಂಜಯನಗರದಲ್ಲಿನ ಖಾಸಗಿ ಕಂಪನಿಯಲ್ಲಿ ಪರ್ಚೆಸಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ.
ಈತ ದೆಹಲಿಯ ಅನು ಯಾದವ್ ಎಂಬಾಕೆಯನ್ನು ಮದುವೆಯಾಗಿದ್ದು, 14 ವರ್ಷದ ಪುತ್ರ, 8 ವರ್ಷದ ಪುತ್ರಿಯಿದ್ದರು. ಈ ಮಧ್ಯೆ ತನಗೆ ಮದುವೆಯಾಗಿಲ್ಲವೆಂದು ಸುಳ್ಳು ಹೇಳಿ ಜೀವನ್ಸಾಥಿ.ಕಾಮ್ನಲ್ಲಿ ಅರ್ಜಿ ಹಾಕಿದ್ದ. ಈ ಬಗ್ಗೆ ಬೆಂಗಳೂರಿನ ರಾಜಾಜಿನಗರದ ಮಹಿಳೆಯೊಬ್ಬಳನ್ನು ನಂಬಿಸಿ ಮದುವೆಯಾಗಲು ಸಿದ್ಧತೆ ನಡೆಸಿದ್ದ. ಆದರೆ ಆಕೆಯನ್ನು ವಿವಾಹವಾಗಲು ಅಡ್ಡಿಯಾಗುವರೆಂದು 2008ರ ಅ.19ರಂದು ಮನೆಯಲ್ಲಿ ಹೆಂಡತಿ-ಮಕ್ಕಳಿಗೆ ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಲ್ಲದೆ, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಗೈದಿದ್ದ.
ಬಳಿಕ ಪತ್ನಿ ಮೈಮೇಲಿದ್ದ ಚಿನ್ನಾಭರಣ ತೆಗೆದುಕೊಂಡು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಆಭರಣ ದೋಚಿದ್ದಾರೆಂದು ತಾನೇ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದ. ತನಿಖೆಗಿಳಿದ ಪೊಲೀಸರಿಗೆ ಧರ್ಮಸಿಂಗ್ ನೇ ಕೊಲೆಗಾರನೆಂಬುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
2.2 ವರ್ಷಗಳ ಕಾಲ ಜೈಲಿನಲ್ಲಿದ್ದ ಧರ್ಮಸಿಂಗ್ ತನಗೆ ಮೂತ್ರಕೋಶದ ಸಮಸ್ಯೆ ಇರುವುದಾಗಿ ಹೇಳಿದ್ದು, ಆದ್ದರಿಂದ ಪೊಲೀಸರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಯ ಯೂರಾಲಜಿ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದ್ದರಿಂದ ಮುಂದೆ ಆಸ್ಪತ್ರೆಗೆ ಹೋದ ಸಂದರ್ಭ ತಪ್ಪಿಸಿಕೊಳ್ಳುವ ಉದ್ದೇಶದಿಂದ ಜೈಲಿನ ಕ್ಯಾಂಟೀನ್ನಿಂದ ಕಾರದ ಪುಡಿ ತೆಗೆದುಕೊಂಡು ಜೇಬಲ್ಲಿಟ್ಟುಕೊಂಡಿದ್ದ.
2010ರ ಡಿ.4ರಂದು ಮತ್ತೆ ವಿಕ್ಟೋರಿಯಾ ಆವರಣದಲ್ಲಿನ ಯೂರಾಲಜಿ ಕೇಂದ್ರಕ್ಕೆ ಪೊಲೀಸರಿಬ್ಬರು ಆತನನ್ನು ಕರೆದೊಯ್ದಿದ್ದರು. ಮಧ್ಯಾಹ್ನ 12ರ ಸುಮಾರಿಗೆ ವೈದ್ಯರ ಸಲಹೆಯಂತೆ ನೀರು ಕುಡಿಸಿ ಆಸ್ಪತ್ರೆಯ ವಾತಾವರಣದಲ್ಲಿ ನಡೆದಾಡಿಸುತ್ತಿದ್ದಾಗ ಪೊಲೀಸರ ಕಣ್ಣಿಗೆ ಕಾರದ ಪುಡಿ ಎರಚಿ ಕೈಕೋಳದ ಸಹಿತ ಓಡಿ ಪರಾರಿಯಾಗಿದ್ದ.
ಹೀಗೆ ತಪ್ಪಿಸಿಕೊಂಡಿದ್ದ ಈತ ಹರಿಯಾಣದ ಅತೇಲಿಮಂಡಿ ಎಂಬಲ್ಲಿ ಬೇರೊಬ್ಬರ ಲಿಕ್ಕರ್ ಲೈಸೆನ್ಸ್ ಪಡೆದು ವೈನ್ ಶಾಪ್ ನಡೆಸುತ್ತಿದ್ದ. 2012ರಲ್ಲಿ ಶಾದಿ.ಕಾಮ್ ಮೂಲಕ ಪರಿಚಯವಾದ ಅಸ್ಸಾಮ್ ಮಹಿಳೆಯೊಬ್ಬಳನ್ನು ಮದುವೆಯಾದ ಈತನಿಗೆ ಇಬ್ಬರು ಪುತ್ರರಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ, ವಿ.ವಿ.ಪುರ ಎಸಿಪಿ ಬಿ.ಎಲ್. ಶ್ರೀನಿವಾಸಮೂರ್ತಿ ಉಸ್ತುವಾರಿಯಲ್ಲಿ, ವಿ.ವಿ.ಪುರ ಇನ್ಸ್ಪೆಕ್ಟರ್ ಕಿರಣ್ಕುಮಾರ್ ಎಸ್. ನೀಲಗಾರ್ ನೇತೃತ್ವದಲ್ಲಿ ಎಸ್ಐ ಮಂಜುನಾಥ್, ಹೆಡ್ ಕಾನ್ಸ್ಟೆಬಲ್ ಶ್ರೀನಿವಾಸಮೂರ್ತಿ, ಕಾನ್ಸ್ಟೆಬಲ್ ಮಹಾಲಿಂಗಪ್ಪ, ತಾಂತ್ರಿಕ ಸಿಬ್ಬಂದಿ ರವಿ ಅವರು ಆರೋಪಿ ಧರ್ಮಸಿಂಗ್ನನ್ನು ಅಸ್ಸಾಂ ರಾಜ್ಯದ ನೆಲ್ಲಿ ಗ್ರಾಮದಲ್ಲಿ ಪತ್ತೆ ಮಾಡಿ ಬಂಧಿಸಿ ಕರೆದುಕೊಂಡು ಬಂದಿದ್ದಾರೆ.