ರಾಮನಗರ ಪಾರ್ಕ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ: ಸಾರ್ವಜನಿಕರಿಂದ ಆಕ್ರೋಶ

ರಾಮನಗರ: ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್​ ಹೊಡೆದು ಪಾರ್ಕ್ ಪೊದೆಗಳ ಮರೆಯಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗುತ್ತಿರುವ ದೃಶ್ಯ ರಾಮನಗರದಲ್ಲಿ ನಡೆಯುತ್ತಿದೆ.‌ ಇಡೀ ಪಾರ್ಕ್​ ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ರಾಮನಗರ ಜಿಲ್ಲೆಯ ಗಾಂಧಿ ಪಾರ್ಕ್​ ಜಿಲ್ಲಾ ಕೇಂದ್ರಕ್ಕಿರುವ ಏಕೈಕ ಉದ್ಯಾನವನವಾಗಿದೆ. ತಾಲೂಕು ಕಚೇರಿ ಹಾಗೂ ನ್ಯಾಯಾಲಯಕ್ಕೆ ಬರುವ ಮಂದಿಗೆ ವಿಶ್ರಾಂತಿ ಪಡೆಯಲು ಇರುವ ಏಕೈಕ ತಾಣವಾಗಿದೆ. ಆದರೆ, ನಗರ ಸಭೆಯ ನಿರ್ಲಕ್ಷ್ಯದಿಂದ ಉದ್ಯಾನವನ ಅನಾಥವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಮಹಾತ್ಮ ಗಾಂಧಿ ಉದ್ಯಾನವನವು ರಾಮನಗರದ ಕೋರ್ಟ್​ ಹಾಗೂ ತಾಲೂಕು ಕಚೇರಿ ನಡುವೆಯಿದೆ. 

ಆದರೆ, ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನವೇ ಹರಿಸುತ್ತಿಲ್ಲ. ಇದೀಗ ಪಾರ್ಕ್ ಸೂಕ್ತ ನಿರ್ವಹಣೆಯಿಲ್ಲದೇ ಅವ್ಯವಸ್ಥೆಯ ಆಗರವಾಗಿದೆ. ಮಧ್ಯಾಹ್ನವಾದರೆ, ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಬದಲಾಗುತ್ತದೆ. ಸಂಜೆಯಾದರೆ, ಕುಡುಕರು ಕುಡಿದು ತೂರಾಡಿ, ಹೊರಳಾಡುವ ದೃಶ್ಯ ಕೂಡ ಸರ್ವೇ ಸಾಮಾನ್ಯವಾಗಿದೆ. ಪಾರ್ಕಿಗೆ ಬರುವ ಕಾಲೇಜು ವಿದ್ಯಾರ್ಥಿಗಳು ಅಸಭ್ಯ ರೀತಿಯಲ್ಲಿ ವರ್ತಿಸತೊಡಗುತ್ತಾರೆ. ಆದರೆ, ಈ ಬಗ್ಗೆ ಯಾರು ಸಹ ಗಮನ ಹರಿಸುತ್ತಿಲ್ಲ. ಪಾಲಕರು ಕೂಡ ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಉದ್ಯಾನವನವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕಿದೆ ಎಂದು ನಗರಸಭೆಯನ್ನು ಒತ್ತಾಯಿಸಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu