
ಕೇರಳ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ದೂರು ನೀಡಲು ಬಂದಾಕೆಯನ್ನು ಅವಮಾನಿಸಿದ ಠಾಣಾಧಿಕಾರಿ ಕರ್ತವ್ಯದಿಂದ ವಜಾ
Thursday, November 25, 2021
ಕೊಚ್ಚಿ: ಕೇರಳ ರಾಜ್ಯದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ಅಲುವಾ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸುಧೀರ್ನನ್ನು ಠಾಣಾಧಿಕಾರಿ ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ದೂರು ನೀಡಲು ಬಂದಿರುವ ಸಂತ್ರಸ್ತೆಯ ದೂರನ್ನು ಆಲಿಸದೆ ಸರ್ಕಲ್ ಇನ್ ಸ್ಪೆಕ್ಟರ್ ಅವಮಾನಿಸಿದ್ದನೆಂದು ಆರೋಪಿಸಿ ಮನನೊಂದು ಕಾನೂನು ವಿದ್ಯಾರ್ಥಿನಿ ಮೌಫಿಯಾ ಪರ್ವೀನ್ (23) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ವಜಾಗೊಳಿಸಿ ಕ್ರಮ ಜರುಗಿಸಲಾಗಿದೆ.
ಸುಧೀರ್ ಈ ರೀತಿ ನಡೆದುಕೊಂಡಿರುವುದು ಇದು ಮೊದಲೇನಲ್ಲ. ಅನೇಕ ಬಾರಿ ದೂರುದಾರ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಕೊಲ್ಲಂನ ಅಂಚಲ್ ಮತ್ತು ಕಡಕ್ಕಲ್ ಪೊಲೀಸ್ ಠಾಣೆಯಲ್ಲಿದ್ದ ವೇಳೆ ಅನುಚಿತವಾಗಿ ವರ್ತನೆ ಸೇರಿದಂತೆ ಅನೇಕ ಆರೋಪಗಳು ಕೇಳಿ ಬಂದಿತ್ತು.
ಇನ್ನು ಕೇರಳ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಉತ್ತರಾ ಕೊಲೆ ಪ್ರಕರಣದಲ್ಲೂ ಸುಧೀರ್ ಹೆಸರು ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ ನೀಡಿದ್ದ ವರದಿಯಲ್ಲಿ ಗಂಭೀರ ಲೋಪಗಳಿರುವುದು ಕಂಡುಬಂದಿತ್ತು. ಅಲ್ಲದೆ, ಸಾಕ್ಷ್ಯ ಸಂಗ್ರಹದಲ್ಲೂ ಆತ ಲೋಪ ಎಸಗಿದ್ದು, ಕೊಲೆಯ ಮಹತ್ವದ ಸಾಕ್ಷಿಗಳ ಸಂಗ್ರಹವನ್ನು ಸುಧೀರ್ ಮಾಡಿರಲೇ ಇಲ್ಲ. ಆ ಬಳಿಕ ಇದೇ ಪ್ರಕರಣದಲ್ಲಿ ಅಪರಾಧ ದಳ ತನಿಖೆ ನಡೆಸಿದ ಬಳಿಕ ಸುಧೀರ್ ಅಸಡ್ಡೆ ತೋರಿದ ಸಾಕ್ಷಿಗಳೇ ಪ್ರಕರಣಕ್ಕೆ ಪ್ರಮುಖ ತಿರುವು ನೀಡಿತ್ತು. ಆ ಬಳಿಕ, ಉತ್ತರಾ ಸಾವಿಗೆ ನ್ಯಾಯವೂ ದೊರಕಿತ್ತು.
ಹಿಂದೆ ಕೊಲ್ಲಂನಲ್ಲಿ ವಲಸೆ ಕಾರ್ಮಿಕರು ದೂರು ನೀಡಲು ಠಾಣೆಗೆ ಬಂದಾಗ ಅವರನ್ನು ಸುಧೀರ್ ಅಗೌರವದಿಂದ ನಡೆಸಿಕೊಂಡಿದ್ದರು. ದೂರು ನೀಡಲು ಬಂದಿರುವ ವಲಸೆ ಕಾರ್ಮಿಕರಿಂದಲೇ ಠಾಣೆಯನ್ನು ಸ್ವಚ್ಛಗೊಳಿಸುವ ಮೂಲಕ ವಿಕೃತಿ ಮೆರೆದಿದ್ದರು. ಆಗಲೂ ಸುಧೀರ್ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೂ ತನ್ನ ಚಾಳಿಯನ್ನು ಸುಧೀರ್ ಬಿಟ್ಟಿರಲೇ ಇಲ್ಕ.
ನ.22ರಂದು ಕಾನೂನು ವಿದ್ಯಾರ್ಥಿನಿ ಮೌಫಿಯಾ ಪರ್ವೀನ್ (23) ಎಂಬ ಕಾನೂನು ವಿದ್ಯಾರ್ಥಿನಿ ತನ್ನ ಪತಿಯ ಕಿರುಕುಳ ಸಹಿಸಲಾಗದೆ ಆತನ ವಿರುದ್ಧ ದೂರು ನೀಡಲು ಬಂದಿದ್ದರು. ಆಗಲೂ ಸುಧೀರ್ ಇದೇ ರೀತಿ ಅಸಭ್ಯವಾಗಿ ವರ್ತಿಸಿದ್ದಾನೆ. ದೂರು ನೀಡಲು ಸ್ಟೇಷನ್ ಗೆ ಹೋಗಿ ಮನೆಗೆ ಬಂದ ಬೆನ್ನಲ್ಲೇ ಮೌಫಿಯಾ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ಅವರು, "ತನಗೆ ಪೊಲೀಸರಿಂದ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಪತಿಯ ಕುಟುಂಬದೊಂದಿಗೆ ಸಂಧಾನಕ್ಕಾಗಿ ನನ್ನನ್ನು ಕರೆಸಿದ್ದರು" ಎಂದು ಮೌಫಿಯಾ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಸಂಧಾನ ನಡೆಯುವ ವೇಳೆ ಮೌಫಿಯಾ ತನ್ನ ಪತಿಯ ಕಪಾಳಕ್ಕೆ ಬಾರಿಸಿದ್ದಳು. ಆಗ ಕೋಪಗೊಂಡ ಪೊಲೀಸರು ಠಾಣೆಯ ಒಳಗೆ ಇಂತಹ ಕೆಲಸ ಮಾಡಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮೌಫಿಯಾಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಸುಧೀರ್ ಆಕೆಯನ್ನು ಅವಮಾನಿಸಿದ್ದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದಿದ್ದ ಮೌಫಿಯಾ, ತಮಗೆ ನ್ಯಾಯ ದೊರಕಲಿಲ್ಲ ಎಂಬ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ಮೌಫಿಯಾ ತೋಡುಪುಳ್ಳಾದ ಖಾಸಗಿ ಕಾಲೇಜೊಂದರಲ್ಲಿ ಕಾನೂನು ಓದುತ್ತಿದ್ದರು.