ಪ್ರೀತಿಯ ಬಲೆಗೆ ಬಿದ್ದಿದ್ದ ಮಗಳು ಬುದ್ಧಿವಾದ ಹೇಳಿದ ತಂದೆಯನ್ನು ಪ್ರಿಯಕರನಿಂದಲೇ ಹತ್ಯೆ ಮಾಡಿಸಿದಳು!
Tuesday, November 23, 2021
ಬೆಂಗಳೂರು: ಪ್ರೀತಿಗೆ ವಿರೋಧ ವ್ಯಕ್ತಪಡಿಸಿರುವ ತಂದೆಯನ್ನು ಪುತ್ರಿಯಳರ್ವಳು ತನ್ನ ಪ್ರಿಯಕರನಿಂದಲೇ ಹತ್ಯೆ ಮಾಡಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಪುತ್ರಿಯು ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರ ಮೂಲಕ ಈ ಕೊಲೆ ಮಾಡಿಸಿದ್ದಾಳೆ.
ಯಲಹಂಕ ನ್ಯೂ ಟೌನ್ ಅಟ್ಟೂರು ಬಡಾವಣೆ ನಿವಾಸಿ, ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್ (46) ಕೊಲೆಯಾದ ದುರ್ದೈವಿ. ಇವರು ಜಿಕೆವಿಕೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಮಗಳ ಸುರಕ್ಷತೆಗಾಗಿ ಬುದ್ಧಿವಾದ ಹೇಳಿದ್ದಾರೆ. ಇದೀಗ ಅವರು ಬುದ್ಧಿವಾದ ಹೇಳಲು ಹೋಗಿ 17 ವರ್ಷದ ನಾಲ್ವರಿಂದ ಕೊಲೆಯಾಗಿ ಹೋಗಿದ್ದಾರೆ.
ತಮ್ಮ ಪುತ್ರಿ ಯುವಕನೋರ್ವನನ್ನು ಪ್ರೀತಿಸುತ್ತಿರುವ ವಿಚಾರ ದೀಪಕ್ ಕುಮಾರ್ ಗಮನಕ್ಕೆ ಬಂದಿದೆ. ಹಾಗಾಗಿ ಅವರು ಆಕೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದರು. ತಂದೆ ಹೀಗೆ ಮಾಡಿರುವುದನ್ನು ಪುತ್ರಿ ತನ್ನ ಪ್ರಿಯಕರನಿಗೆ ತಿಳಿಸಿದ್ದಳು. ಭಾನುವಾರ ಬೆಳಗ್ಗೆ ಆಕೆಯ ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಲಬುರಗಿಗೆ ತೆರಳಿದ್ದರು. ಮನೆಯಲ್ಲಿ ತಂದೆ ಮಾತ್ರ ಇರುವುದಾಗಿ ಪುತ್ರಿ ಪ್ರಿಯಕರನಿಗೆ ಮಾಹಿತಿ ನೀಡಿದ್ದಳು. ಆತನನ್ನು ಹತ್ಯೆ ಮಾಡಲು ಇದೇ ಸರಿಯಾದ ಸಮಯ ಎಂದುಕೊಂಡ ಪ್ರಿಯಕರ ತನ್ನ ಮೂವರು ಅಪ್ರಾಪ್ತ ವಯಸ್ಸಿನ ಸ್ನೇಹಿತರೊಂದಿಗೆ ರವಿವಾರ ರಾತ್ರಿ 12.30ಕ್ಕೆ ದೀಪಕ್ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ.
ದೀಪಕ್ ಬಾಗಿಲು ತೆಗೆಯುತ್ತಿದ್ದಂತೆ ನಾಲ್ವರು ಬಾಲಕರು ಜತೆಯಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ದೀಪಕ್ ಕುಮಾರ್ ಸಿಂಗ್ ಚೀರಾಟ ಕೇಳಿ ನೆರೆ-ಹೊರೆಯವರು ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ತಕ್ಷಣ ಯಲಹಂಕ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಲ್ವರು ಆರೋಪಿಗಳ ಸುಳಿವು ದೊರಕಿದ್ದು, ಸದ್ಯದಲ್ಲೇ ಅವರನ್ನು ಬಂಧಿಸಿ ವಿಚಾರಣೆ ನಡೆಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.