ನಿಶ್ಚಿತಾರ್ಥಕ್ಕೆ ನಾಲ್ಕು ದಿನದ ಮೊದಲಿಗೆ ಭಾವಿ ಪತಿಯ 'ಈ ಒಂದು' ನಿರ್ಧಾರದಿಂದ ಮನನೊಂದು ಯುವತಿ ಆತ್ಮಹತ್ಯೆ!

ಮಹೇಶ್ವರಂ: ಇನ್ನೇನು ನಿಶ್ಚಿತಾರ್ಥವಾಗಿ ಮದುವೆಯ ಕನಸಿನ ಸಂಭ್ರಮದಲ್ಲಿದ್ದ ಯುವತಿಗೆ ಭಾವೀ ಪತಿಯಿಂದ ಆಘಾತದ ಸುದ್ದಿಯೊಂದು ಬಂದಿದೆ. ಇದರಿಂದ ಮನನೊಂದ ಯುವತಿ ಇದೀಗ ನೇಣಿಗೆ ಕೊರಳೊಡ್ಡಿದ್ದಾಳೆ. ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸ್ಮಶಾನದ ವಾತಾವರಣ ನಿರ್ಮಾಣವಾಗಿದೆ.

ಅಷ್ಟಕ್ಕೂ ನಡೆದದ್ದೇನೆಂದರೆ, ತೆಲಂಗಾಣದ ಮಹೇಶ್ವರಂ ಮಂಡಲದ ಪೆಂಡ್ಯಾಲಾ ಗ್ರಾಮದಲ್ಲಿ ಪದವಿ ವಿದ್ಯಾರ್ಥಿನಿಗೆ ಅಮೀರ್​ಪೇಟೆ ಗ್ರಾಮದ ಕಾರ್ತಿಕ್​ ಎಂಬಾತನೊಂದಿಗೆ ಮದುವೆ ನಿಶ್ಚಯವಾಗಿತ್ತು. ಗುರುವಾರ ನಿಶ್ಚಿತಾರ್ಥವಾಗಬೇಕಿತ್ತು. ಆದರೆ, ಕಾರ್ತಿಕ್ ಭಾನುವಾರ ನಿಶ್ಚಿತಾರ್ಥವನ್ನು ರದ್ದು ಮಾಡಿದ್ದ. ಪರಿಣಾಮ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಂಗಳವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳ್ಳಂಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತ ಪ್ರಗತಿ ತಾಯಿ, ಮಗಳನ್ನು ನೋಡಲು ಹೋದಾಗ ಫ್ಯಾನಿನಲ್ಲಿ ನೇತಾಡುತ್ತಿದ್ದ ಆಕೆಯ ಮೃತದೇಹ ಪತ್ತೆಯಾಗಿದೆ. 

ಘಟನೆ ನಡೆದ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮೃತ ಪ್ರಗತಿಯ ಮೊಬೈಲ್​ ಫೋನ್​ ವಶಕ್ಕೆ ಪಡೆದಿದ್ದು, ಸಾವಿಗೆ ನಿಶ್ಚಿತಾರ್ಥ ಮುರಿದುಬಿದ್ದಿರುವುದು ಹೊರತುಪಡಿಸಿ ಬೇರೆ ಯಾವುದಾದರೂ ಕಾರಣ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ನಿಶ್ಚಿತಾರ್ಥ ಯಾವ ಕಾರಣಕ್ಕೆ ರದ್ದಾಗಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆ ದೊರೆತಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕಾರ್ತಿಕ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ, ಕಾರಣ ತಿಳಿಯಲಿದೆ.