ಮಹಾರಾಷ್ಟ್ರ(ಪುಣೆ): ಕಬಡ್ಡಿ ಆಟದ ಅಭ್ಯಾಸಕ್ಕೆಂದು ಹೋಗುತ್ತಿದ್ದ 14ರ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರ ರಾಜ್ಯದ ಪುಣೆಯ ರಸ್ತೆ ಬದಿಯಲ್ಲಿ ನಡೆದಿದೆ.
8ನೇ ತರಗತಿ ಓದುತ್ತಿದ್ದ ಈ ವಿದ್ಯಾರ್ಥಿನಿಯು ಅ.12ರಂದು ಸಂಜೆ 5.45ರ ಸುಮಾರಿಗೆ ಬಿಬೇವಾಡಿಯಲ್ಲಿನ ಯಶ್ ಲಾನ್ಸ್ಗೆ ಕಬಡ್ಡಿ ಆಟ ಅಭ್ಯಾಸ ಮಾಡಲು ತೆರಳುತ್ತಿದ್ದಳು. ಈ ವೇಳೆ 2 ಬೈಕ್ ಗಳಲ್ಲಿ ಬಂದಿರುವ ಮೂವರು ಆರೋಪಿಗಳು ಹರಿತವಾದ ಆಯುಧಗಳಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಬಿಬೇವಾಡಿ ಪೊಲೀಸ್ ಠಾಣೆ ಹಿರಿಯ ಇನ್ಸ್ಪೆಕ್ಟರ್ ಸುನಿಲ್ ಜವರೇ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಪ್ರಕರಣದ ಮುಖ್ಯ ಆರೋಪಿ ರಿಷಿಕೇಶ್ ಭಾಗವತ್ (22)ನನ್ನು ಪೊಲೀಸರು ಬಂಧಿಸಿದ್ದಾರೆ. ರಿಷಿಕೇಶ್ ಮೃತಪಟ್ಟ ಬಾಲಕಿಯ ಸಂಬಂಧಿಯಾಗಿದ್ದು, ಆಕೆಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಆತನ ಪ್ರೀತಿಯನ್ನು ಬಾಲಕಿ ಹಾಗೂ ಆಕೆಯ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಕೋಪದಿಂದ ಕೊಲೆ ಮಾಡಿದ್ದಾನೆ ಎಂದು ಪುಣೆ ವಲಯ ಡಿಸಿಪಿ ನಮೃತಾ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಬಿಬೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.