-->

ತಾರಾ ದಂಪತಿ ಸಮಂತಾ-ನಾಗಚೈತನ್ಯ ಬೇರೆಯಾಗಲು ಈ ಸ್ಟಾರ್ ನಟನೇ ಕಾರಣ: ಬೊಟ್ಟು ಮಾಡಿದ ನಟಿ ಕಂಗನಾ

ತಾರಾ ದಂಪತಿ ಸಮಂತಾ-ನಾಗಚೈತನ್ಯ ಬೇರೆಯಾಗಲು ಈ ಸ್ಟಾರ್ ನಟನೇ ಕಾರಣ: ಬೊಟ್ಟು ಮಾಡಿದ ನಟಿ ಕಂಗನಾ

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಈಗ ತಾರಾ ದಂಪತಿ ಸಮಂತಾ-ನಾಗಚೈತನ್ಯ ದಾಂಪತ್ಯ ವಿಚ್ಛೇದನವೇ ಹೆಚ್ಚು ಸುದ್ದಿಯಲ್ಲಿದೆ. ಬಹಳಷ್ಟು ಕಾಲದಿಂದ ಈ ವಿಚಾರ ಭಾರೀ ಚರ್ಚೆಯಲ್ಲಿದ್ದರೂ ನಾಗ - ಸಮಂತಾ ಮಾತ್ರ ಈ ವಿಚಾರವಾಗಿ ಚಕಾರ ಎತ್ತಿರಲಿಲ್ಲ. ಆದರೆ ನಿನ್ನೆ ಅಧಿಕೃತವಾಗಿ ವಿಚ್ಛೇದನ ಕೊಡುವುದಾಗಿ​ ಘೋಷಣೆ ಮಾಡಿಕೊಂಡಿದ್ದಾರೆ‌.

ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿರುವಂತೆಯೇ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರು ನಾಗ - ಸಮಂತಾ ಬೇರೆಯಾಗಲು ಬಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ಕಾರಣ ಎಂದು ಬೊಟ್ಟು ಮಾಡಿ ಗಂಭೀರ ಆರೋಪ ಮಾಡಿದ್ದಾರೆ. 


ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ‌ ಕಂಗಣಾ ಅವರು, "ದಕ್ಷಿಣ ಭಾರತ ಸಿನಿರಂಗದ ಸೂಪರ್​ ಸ್ಟಾರ್​ ದಿಢೀರನೇ ತಮ್ಮ ಪತ್ನಿಗೆ ವಿಚ್ಛೇದನ ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಚುಕ್ಕಿಯಿಟ್ಟಿದ್ದಾರೆ. ಈ ನಟ ಇತ್ತೀಚೆಗಷ್ಟೇ 10 ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡ ಡಿವೋರ್ಸ್​ ತಜ್ಞ ಎಂದೇ ಖ್ಯಾತರಾಗಿರುವ ಬಾಲಿವುಡ್​ ಸೂಪರ್​ಸ್ಟಾರ್​ ಸಂಪರ್ಕಕ್ಕೆ ಬಂದಿದ್ದರು. ಈ ಸೂಪರ್​ಸ್ಟಾರ್​ ಅನೇಕ ಮಹಿಳೆಯರ ಮತ್ತು ಮಕ್ಕಳ ಜೀವನವನ್ನು ಹಾಳುಗೆಡವಿದ್ದಾರೆ. ಈಗ ಆ ಡಿವೋರ್ಸ್ ತಜ್ಞ ಬಾಲಿವುಡ್ ನಟನ ಮಾರ್ಗದರ್ಶಕ ಬೆಳಕು ದಕ್ಷಿಣ ಭಾರತದ ನಟನ ಮೇಲೆ ಬಿದ್ದಿದೆ. ನಾನು‌ ಈ ರೀತಿ ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಎಂದು ನಾನು ಅಂದುಕೊಳ್ಳುತ್ತೇನೆ" ಕಂಗನಾ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್​ ನಟ ಆಮೀರ್​ ಖಾನ್​ ತಮ್ಮ ಪತ್ನಿ ಕಿರಣ್​ ರಾವ್​ ಗೆ ವಿಚ್ಛೇದನ ನೀಡುವ​ ಮೂಲಕ 15 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ.  ನಾಗಚೈತನ್ಯ ಅವರು ಆಮೀರ್​ ಖಾನ್​ ಅಭಿನಯದ 'ಲಾಲ್​ ಸಿಂಗ್​ ಚಡ್ಡಾ' ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಆಮೀರ್​ ಖಾನ್ ಹಾಗೂ ನಾಗಚೈತನ್ಯ ತುಂಬಾ ಆಪ್ತರಾಗಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ರಿಲೀಸ್ ಆಗಿರುವ ನಾಗಚೈತನ್ಯ ಅವರ “ಲವ್​ ಸ್ಟೋರಿ” ಸಿನಿಮಾ ಪ್ರೀ ರಿಲೀಸ್​ ಈವೆಂಟ್​ನಲ್ಲೂ ಆಮೀರ್​ ಖಾನ್​ ಪಾಲ್ಗೊಂಡಿದ್ದರು. ಅಲ್ಲದೆ, ನಾಗರ್ಜುನ ಮನೆಯಲ್ಲಿ ಆಮೀರ್​ ಅವರಿಗೆ ಸಣ್ಣ ಪಾರ್ಟಿಯನ್ನು ಸಹ ಆಯೋಜಿಸಲಾಗಿತ್ತು. ಆದ್ದರಿಂದ ಈ ಎಲ್ಲಾ ಬರಹವನ್ನು ಆಮೀರ್ ಖಾನ್  ಅವರನ್ನು ಉದ್ದೇಶಿಸಿಯೇ ಕಂಗನಾ ಪೋಸ್ಟ್​ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಅ.2 ರಂದು ತಾರಾ ದಂಪತಿ  ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶವನ್ನು ಬರೆದುಕೊಂಡಿದ್ದಾರೆ. “ಸಾಕಷ್ಟು ಸಮಾಲೋಚನೆ ನಡೆಸಿದ ಬಳಿಕವು ನಾವಿಬ್ಬರೂ ಪತಿ-ಪತ್ನಿ ಸಂಬಂಧ ತೊರೆದು ಬೇರೆಯಾಗುವ ನಿರ್ಧಾರ ಕೈಗೊಂಡಿದ್ದೇವೆ. ಒಂದು ದಶಕದ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ನಮ್ಮಿಬ್ಬರ ಮಧ್ಯೆ ಮುಂದೆಯೂ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಬರೆದುಕೊಂಡಿದ್ದಾರೆ. 

ಜೊತೆಗೆ, ನಮ್ಮ‌ ಈ ಸಂಕ್ರಮಣ ಕಾಲಘಟ್ಟದಲ್ಲಿ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ನಾವು ಸಮಸ್ಥಿತಿಗೆ ಬರಲು ಅಗತ್ಯವಾದ ಏಕಾಂತತೆ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article