ಚಪಾತಿ ಮಾಡಿಡು, 3 ಗಂಟೆಯೊಳಗೆ ಬರುವೆನೆಂದವಳು ಪತ್ತೆಯಾದದ್ದು ಹೆಣವಾಗಿ: ನಟಿ ಸವಿ ಮಾದಪ್ಪ ತಾಯಿ ಅಳಲು

ರಾಮನಗರ: ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಕುತೂಹಲದ ತಿರುವು ದೊರಕುತ್ತಲೇ ಇದ್ದು, ಅನಾರೋಗ್ಯದ ನಿಮಿತ್ತ ತಾವು ಆತ್ಮಹತ್ಯೆ ಮಾಡುವುದಾಗಿ ನಟಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ ಕೂಡ ದೊರಕಿದೆ. 

ಆದರೆ ಅವರ ತಾಯಿ ಕಣ್ಣೀರಿಟ್ಟು ಹೇಳುವ ಮಾತಿಗೂ, ಡೆತ್ ನೋಟ್ ಬರಹಕ್ಕೂ ತಾಳೆಯಾಗುತ್ತಿಲ್ಲ. ರಾಮನಗರದಲ್ಲಿ ವಾಸವಿರುವ ಅವರ ತಾಯಿ ಕಣ್ಣೀರಾಗಿ 'ನನ್ನ ಮಗಳ ಸಾವನ್ನು ನಂಬಲಾಗುತ್ತಿಲ್ಲ. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದರೆ ನಾನು ನಂಬುವುದಿಲ್ಲ ಎಂದಿದ್ದಾರೆ‌.

ಅಲ್ಲದೆ ಆತ್ಮಹತ್ಯೆಯ ಸುದ್ದಿ ದೊರೆಯುದಕ್ಕಿಂತ ಮೊದಲು ತನಗೆ ಕರೆ ಮಾಡಿರುವ ಮಗಳು ಸವಿ ಮಾದಪ್ಪ‌ 'ಮೂರು ಗಂಟೆಯ ಒಳಗೆ ಮನೆಗೆ ಬರುತ್ತೇನೆ. ನನ್ನ ಇಷ್ಟದ ಸೊಪ್ಪಿನ ಪಲ್ಯ, ಚಪಾತಿ, ಟೊಮ್ಯಾಟೋ ಸಾರು ಮಾಡಿಡು' ಎಂದು ಹೇಳಿದ್ದಾರೆ. ಆದರೆ ಅವಳು ಬಂದೇ ಇಲ್ಲ, ಬದಲಾಗಿ ಸಾವಿನ ಸುದ್ದಿ ಬಂದಿದೆ ಎಂದು ಹನಿಗಣ್ಣಾಗುತ್ತಾರೆ. 

ಅವಳು ಹೇಳಿರುವುದನ್ನೆಲ್ಲಾ ತಯಾರು ಮಾಡಿಟ್ಟಿದ್ದೆ. ಆದರೆ ಆ ಬಳಿಕ ದೊರಕಿದ್ದೇ ಅವಳು ಆತ್ಮಹತ್ಯೆ ಸುದ್ದಿ. ಇದು ನನಗೆ ನಂಬಲಾಗುತ್ತಿಲ್ಲ ಎಂದು ದುಃಖಿಸುತ್ತಾರೆ. 

ನಮ್ಮ ಮಗ ಕೂಡ ಬೆಂಗಳೂರಿನಲ್ಲಿದ್ದು, ಅವನೂ ಮನೆಗೆ ಬರುವವನಿದ್ದ. ಆದರೆ ಸವಿ ಬಸ್‌ನಲ್ಲಿ ಬರುತ್ತೇನೆ ಎಂದಿದ್ದಳು. ಮಗ ಬೈಕ್‌ನಲ್ಲಿ ಬರುತ್ತೇನೆ ಅಂದಿದ್ದ. ನನಗೆ ಕರೆ ಮಾಡುವ ಸಂದರ್ಭದಲ್ಲಿಯೂ ಆಕೆ ಚೆನ್ನಾಗಿಯೇ ಇದ್ದಳು. ಮೂರೇ ಮೂರು ಗಂಟೆಯಲ್ಲಿ ಬರುತ್ತೇನೆ. ಎಲ್ಲವನ್ನೂ ರೆಡಿ ಮಾಡಿಡು ಎಂದಿದ್ದಳು. ಆದರೆ ಆ ಬಳಿಕ ಅವಳು ಆತ್ಮಹತ್ಯೆ ಮಾಡಿದ್ದಾಳೆಂದರೆ ನನಗೆ ನಂಬಲಾಗುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. 

ಇದರಿಂದ ನಟಿಯ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಈಗಾಗಲೇ ನಟಿಯ ತಂದೆ ಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಓರ್ವ ನಟ ಹಾಗೂ ನಟಿಯ ಪಿಎ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 
BREAKING NEWS
Loading latest news...
Join our WhatsApp Channel Powered By : Online Pudu