ಮಾಯಾಂಗನೆಯ ಮೋಡಿಗೆ ಮರುಳಾದ ಯುವಕ 1.20 ಕೋಟಿ ಪಂಗನಾಮ ಹಾಕಿಸಿಕೊಂಡ!

ಹೈದರಾಬಾದ್​: ಉದ್ಯಮ ಆರಂಭಿಸುವ​ ಹೆಸರಿನಲ್ಲಿ ಯುವಕನೋರ್ವನನ್ನು ಬಲೆ ಬೀಳಿಸಿರುವ ಮಾಯಾಂಗನೆಯೊಬ್ಬಳು ಬರೋಬ್ಬರಿ 1.20 ಕೋಟಿ ರೂ. ವಂಚನೆಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅಂಬರಪೇಟ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಂಬರ್​ಪೇಟೆಯ ದೀದೀ ಕಾಲನಿಯ ನಿವಾಸಿ ಆರೋಪಿತೆ ಅರ್ಚನಾ (24) ಬ್ಯೂಟಿಷಿಯನ್​ ಕೊರ್ಸ್​ ಮುಗಿಸಿ ಕುಕಟಪಲ್ಲಿ ಮತ್ತು ದಿಲ್ಶುಕ್​ನಗರದಲ್ಲಿ ಪ್ರತ್ಯೇಕ ಬ್ಯೂಟಿ ಪಾರ್ಲರ್​ಗಳನ್ನು ನಡೆಸುತ್ತಿದ್ದಳು. ಈಕೆಗೆ ಆನ್​ಲೈನ್​ ಮೂಲಕ ಆಂಧ್ರ ಪ್ರದೇಶದ ಗುಂಟೂರು ಮೂಲದ ಸುಬ್ಬಾರೆಡ್ಡಿ (35) ಎಂಬಾತನ ಪರಿಚಯ ಆಗಿದೆ. ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಆಕೆ ಸುಬ್ಬಾರೆಡ್ಡಿಯಲ್ಲಿ ತನ್ನ ಉದ್ಯಮಕ್ಕೆ ಹಣ ಹೂಡುವಂತೆ ಕೇಳಿಕೊಂಡಿದ್ದಾಳೆ. ಅಲ್ಲದೆ, ಹೆಚ್ಚಿನ ಹಣ ಕೊಡುವುದಾಗಿಯೂ ಹೇಳಿ ನಂಬಿಕೆ ಹುಟ್ಟುವಂತೆ ಮಾಡಿದ್ದಾಳೆ.

ವಾಟ್ಸ್​ಆ್ಯಪ್​ ಸ್ಟೇಟಸ್ ನಲ್ಲಿ ಆಕೆಯ  ಫೋಟೋಗಳನ್ನು ನೋಡಿ ಮರುಳಾಗಿದ್ದ ಸುಬ್ಬಾರೆಡ್ಡಿ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್​ ಮಾಡುತ್ತಿದ್ದ. ಆಕೆಯ ಬಣ್ಣದ ಮಾತುಗಳಿಗೆ ಮರುಳಾಗಿದ್ದ ಸುಬ್ಬಾರೆಡ್ಡಿ ಹಂತ ಹಂತವಾಗಿ ಆನ್​ಲೈನ್​ ಮೂಲಕ ಆಕೆಯ ಖಾತೆಗೆ ಹಣ ಹಾಕಿದ್ದಾನೆ‌. ಕಳೆದ ಡಿಸೆಂಬರ್​ನಿಂದ ಆಗಸ್ಟ್​ವರೆಗೆ ಬರೋಬ್ಬರಿ 1.20 ಕೋಟಿ ರೂ‌. ಹಣವನ್ನು ಅರ್ಚನಾ ಖಾತೆಗೆ ಜಮಾ ಮಾಡಿದ್ದ. ಎಲ್ಲಾ ಹಣ ಖಾತೆಗೆ ಜಮೆಯಾದ ತಕ್ಷಣ ಮಾಯಾಂಗನೆ ಅರ್ಚನಾ ತನ್ನ ವರಸೆ ಬದಲಿಸಿದ್ದಾಳೆ. ಆ ಬಳಿಕ ಆಕೆ ಸುಬ್ಬಾರೆಡ್ಡಿಗೆ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಳು. ನೇರವಾಗಿ ಹೋಗಿ ಮಾತನಾಡಲು ಆಕೆಯ ವಿಳಾಸ ಸುಳಿವು ಇರಲಿಲ್ಲ. 

ಆರೋಪಿತೆ ಅರ್ಚನಾಗೆ​ ಅನಿಲ್​ ಕುಮಾರ್​ ಎಂಬಾತನ ಜತೆ ಸಂಬಂಧ ಇತ್ತು. ಸುಬ್ಬಾರೆಡ್ಡಿಯಿಂದ ವಂಚಿಸಿದ್ದ ಹಣದಿಂದ ಭಾರೀ ಪ್ರಮಾಣದಲ್ಲಿ ಚಿನ್ನಾಭರಣ ಮತ್ತು ಕಾರನ್ನು ಖರೀದಿಸಿದ್ದಳು. ಇತ್ತ ಕರೆ ಮಾಡಿ​ದ ಸುಬ್ಬಾರೆಡ್ಡಿಯು ಅರ್ಚನಾನನ್ನು ಸಂಪರ್ಕಿಸಿ ತನ್ನ ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದ. ಮೊದಮೊದಲು ಇಲ್ಲಸಲ್ಲದ ಸಬೂಬು ಹೇಳಿಕೊಂಡು ಬಂದಿದ್ದ ಅರ್ಚನಾ ಕೊನೆಗೆ ತನ್ನ, ಬಾಯ್​ಫ್ರೆಂಡ್​ ಜತೆ ಸೇರಿಕೊಂಡು ಸುಬ್ಬಾರೆಡ್ಡಿಗೆ ಕೊಲೆ ಬೆದರಿಕೆ ಹಾಕಿದ್ದಳು. 

ಮಾಯಾಂಗನೆಯ ಮೋಸವನ್ನು ಅರಿತ ಸುಬ್ಬಾರೆಡ್ಡಿಯು, ಅರ್ಚನಾ ವಿಳಾಸವನ್ನು ಪತ್ತೆ ಮಾಡಿ, ಅಂಬರಪೇಟೆ ಪೊಲೀಸ್​ ಠಾಣೆಯಲ್ಲಿ ಅರ್ಚನಾ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಅರ್ಚನಾ ಸಹಿತ ಆಕೆಯ ಗೆಳೆಯ ಅನಿಲ್​ ಕುಮಾರ್​ಮತ್ತು ಸಾಯಿರಾಮ್​ ನನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu