ಕಾಂಗ್ರೆಸ್ ಪಕ್ಷವನ್ನು ಭಯೋತ್ಪಾದನೆಯ ತಾಯಿ ಎಂದು ಜರೆದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ: ಯುಪಿಯಲ್ಲಿ‌ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಪಕ್ಷವನ್ನು ಭಯೋತ್ಪಾದನೆಯ ತಾಯಿ ಎಂದು ಜರೆದಿದ್ದಾರೆ. ಅಲ್ಲದೆ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಸಂತ ಕಬೀರ್ ನಗರದಲ್ಲಿ 126 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಕಾರಾಗೃಹದ ಶಿಲಾನ್ಯಾಸ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್  ಭಯೋತ್ಪಾದನೆಯ ವಿಷ ಬೀಜವನ್ನು ಬಿತ್ತಿದೆ ಎಂದು ಕಿಡಿ ಕಾರಿದ್ದಲ್ಲದೇ, 2022ರ ಚುನಾವಣೆಯ ಬಳಿಕ ಕಾಂಗ್ರೆಸ್ ನಿರ್ನಾಮ ಆಗುವುದರಲ್ಲಿ ಅನುಮಾನವಿಲ್ಲ. ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆಲ್ಲುವುದು ಕೂಡ ಅನುಮಾನ ಎಂದಿದ್ದಾರೆ.

ಸಮಾಜವಾದಿ ಹಾಗೂ ಬಹುಜನ ಸಮಾಜ ಪಕ್ಷದ ವಿರುದ್ಧವೂ ಗುಡುಗಿದ ಅವರು, ಅಧಿಕಾರದಲ್ಲಿದ್ದಾಗ ಎರಡೂ ಪಕ್ಷವೂ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಸರಿಯಾದ ವಿದ್ಯುತ್ ಪೂರೈಕೆ ಕೂಡ ಮಾಡಿಲ್ಲ ಎಂದಿದ್ದಾರೆ.

ಇಷ್ಟು ವರ್ಷಗಳ ಆಡಳಿತದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಮಾಫಿಯಾ ಆಡಳಿತವನ್ನು ಹೊರತುಪಡಿಸಿ ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್‌ಪಿ ಬೇರೆ ಏನು ನೀಡಿದೆ ಎಂದು ಪ್ರಶ್ನಿಸಿದ ಯೋಗಿ ಆದಿತ್ಯನಾಥ್ ಅವರು, ಭಗವಾನ್ ರಾಮನ ಭಕ್ತರ ಮೇಲೆ ಗುಂಡು ಹಾರಿಸಿದವರು ಮತ್ತು ತಾಲಿಬಾನಿಗಳನ್ನು ಬೆಂಬಲಿಸುತ್ತಿರುವವರನ್ನು ರಾಜ್ಯದ ಜನರು ಎಂದಿಗೂ ಸಹಿಸುವುದಿಲ್ಲ. ಅಲ್ಲದೆ ರಾಮನ ನಿಂದನೆ ಹಾಗೂ ರಾಮ ಭಕ್ತರ ಮೇಲೆ ಗುಂಡು ಹಾರಿಸಿರುವ ಫಲವನ್ನು ಕಾಂಗ್ರೆಸ್ ಉಣ್ಣಲಿದೆ ಎಂದು ಹೇಳಿದರು.