ಶಾಸಕರೊಬ್ಬರು ಮಾಡಿದ ವಿಚಿತ್ರ ವಿಲಕ್ಷಣ ಪ್ರತಿಭಟನೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಹೌದು, ಈ ಘಟನೆ ನಡೆದಿರುವುದು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ.
ಇಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆಕ್ರೋಶದಲ್ಲಿ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಮಹಾನಗರ ಪಾಲಿಕೆ ಆಯುಕ್ತರ ಮನೆಯ ಮುಂದೆ ಭಾರೀ ಪ್ರಮಾಣದಲ್ಲಿ ಕಸ ಸುರಿದು ಪ್ರತಿಭಟಿಸಿದ್ದಾರೆ.
ವಿಶ್ವೇಶ್ವರಯ್ಯ ನಗರದಲ್ಲಿರುವ ಪಾಲಿಕೆ ಆಯುಕ್ತ ಜಗದೀಶ್ ಕೆ. ಎಚ್. ನಿವಾಸದ ಮುಂದೆ ಬೆಳ್ಳಂಬೆಳಗ್ಗೆ ಟ್ರ್ಯಾಕ್ಟರ್ ನಲ್ಲಿ ಕಸ ತಂದು ಸುರಿದು ಗೇಟ್ ತುಂಬಾ ಹರಡಿ ಸ್ಥಳದಿಂದ ತೆರಳಿದ್ದಾರೆ.
ತಮ್ಮ ತಂಡದೊಂದಿಗೆ ಹೋಗಿ ಟ್ರ್ಯಾಕ್ಟರ್ ನಲ್ಲಿ ಕಸವನ್ನು ತುಂಬಿಕೊಂಡು ಬಂದ ಶಾಸಕರು, ಸ್ವತಃ ತಾವೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದಾರೆ.
ಪಾಲಿಕೆ ಆಯುಕ್ತರ ಮನೆಯ ಮುಂದಿನ ಗೇಟ್ ಬಳಿಯಲ್ಲಿ ಕಸವನ್ನು ಸುರಿಯುವ ಮೂಲಕ ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
