ಮಂಗಳೂರಿನ ಹೃದಯ ಭಾಗದಲ್ಲಿ ಒಂದು ಅಚ್ಚರಿಯ ಸಂಗತಿ ಘಟಿಸಿದೆ. ನಗರದ ನವಭಾರತ ಸರ್ಕಲ್ ಎಂದೇ ಪ್ರಸಿದ್ಧಿ ಪಡೆದ ಮಂಜೇಶ್ವರ ಗೋವಿಂದ ಪೈ ವೃತ್ತದಡಿಯಲ್ಲಿ ಬೃಹತ್ ಬಾವಿಯೊಂದು ಪತ್ತೆಯಾಗಿದೆ.
ಅದನ್ನು ಕಬ್ಬಿಣದ ಸಲಾಕೆಗಳನ್ನು ಬಳಸಿ ಕಾಂಕ್ರೀಟ್ ಹಾಕಿ ಮುಚ್ಚಲಾಗಿತ್ತು.
ಬಾವಿಯೊಳಗೆ ನೀರು ಇರುವುದು ಪತ್ತೆಯಾಗಿದ್ದು, ಐದಾರು ದಶಕಗಳ ಹಿಂದೆ ಈ ವೃತ್ತವನ್ನು ನಿರ್ಮಿಸಿರಬಹುದು. ಅದಕ್ಕೂ ಮುನ್ನ, ಇಲ್ಲೊಂದು ಬೃಹತ್ ತೆರೆದ ಬಾವಿ ಇತ್ತು. ಈ ಬಾವಿಯನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬ ಸಲಹೆಗಳು ಕೇಳಿಬಂದಿದೆ.
ಕಳೆದ ರಾತ್ರಿ ಈ ವೃತ್ತವನ್ನು ಧ್ವಂಸಗೊಳಸಿಲಾಗಿತ್ತು. ಮಂಜೇಶ್ವರ ಗೋವಿಂದ ಪೈ ಅವರ ಸ್ಮಾರಕಾರ್ಥ ವೃತ್ತವಾಗಿರುವ ಇದನ್ನು ಕೆಡವಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ವೃತ್ತ ಅವೈಜ್ಞಾನಿಕವಾಗಿದ್ದು, ಇದನ್ನು ಮತ್ತೆ ಈಗಿನ ಅಗತ್ಯಕ್ಕೆ ತಕ್ಕಂತೆ ಪುನರ್ನಿರ್ಮಾಣ ಮಾಡಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಹೇಳಿದ್ದಾರೆ.
ಹಂಪನಕಟ್ಟೆ ಕಾಂಕ್ರೀಟ್ ಕಾಮಗಾರಿಯ ಸಂದರ್ಭದಲ್ಲೂ ತಾಜ್ಮಹಲ್ ಹೊಟೇಲ್ ಪಕ್ಕದಲ್ಲಿ ಬೃಹತ್ ತೆರೆದ ಬಾವಿಯೊಂದು ಪತ್ತೆಯಾಗಿತ್ತು. ಇದೀಗ, ನವಭಾರತ ಸರ್ಕಲ್ ನಡಿಯಲ್ಲೂ ಬೃಹತ್ ಬಾವಿ ಪತ್ತೆಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

