Suvidha Homes Problems | ಸುವಿಧಾ ಹೋಮ್ಸ್ ಪ್ರಕರಣ: ವಿಲಾಸ್ ನಾಯಕ್‌ಗೆ ತಾತ್ಕಾಲಿಕ ರಿಲೀಫ್‌

 



ಉಡುಪಿ: ಸುವಿಧಾ ಹೋಮ್ಸ್ ಅಪಾರ್ಟ್‌ಮೆಂಟ್‌ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಗ್ರಾಹಕ ನ್ಯಾಯಾಲಯ ವಿಲಾಸ್ ನಾಯಕ್ ಅವರಿಗೆ ಜಾಮೀನು ನೀಡಿದೆ. ಇದರಿಂದ ಬಂಧನ ಭೀತಿಯಲ್ಲಿದ್ದ ಉದ್ಯಮಿ ವಿಲಾಸ್‌ ನಾಯಕ್‌ಗೆ ತಾತ್ಕಾಲಿಕ ರಿಲೀಫ್ ದೊರೆತಂತಾಗಿದೆ. 


ಹಲವು ತಿಂಗಳಿನಿಂದ ಕಣ್ಮರೆಯಾಗಿದ್ದ ವಿಲಾಸ್ ನಾಯಕ್ ಗ್ರಾಹಕ ನ್ಯಾಯಾಲಯಕ್ಕೆ ಹಾಜರಾಗಿ ಷರತ್ತುಬದ್ಧ ಜಾಮೀನು ಪಡೆದುಕೊಂಡರು. ನಗರದಿಂದ ಹೊರಗೆ ಇದ್ದ ಕಾರಣ ವಿಲಾಸ್ ತಾಯಿ ವೀಣಾ ಜಿ. ನಾಯಕ್ ನ್ಯಾಯಾಲಯದಿಂದ ದೂರ ಉಳಿದಿದ್ದರು. ಮುಂದಿನ ವಿಚಾರಣಾ ದಿನದಂದು ಎರಡನೇ ಆರೋಪಿ ವೀಣಾ ನಾಯಕ್ ಅವರನ್ನು ನ್ಯಾಯಾಲಯದ ಮುಂದೆ ಹಾಜರಿಡುವಂತೆ ಗ್ರಾಹಕ ನ್ಯಾಯಾಲಯ ಸೂಚಿಸಿದೆ.


ಉಡುಪಿ ನ್ಯಾಯಾಲಯ ಘೋಷಿಸಿದ ಪರಿಹಾರದ ಅರ್ಧದಷ್ಟು ಮೊತ್ತವನ್ನು ಠೇವಣಿ ಇಟ್ಟು ರಾಜ್ಯ ಗ್ರಾಹಕ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಭಾರ ಈಗ ವಿಲಾಸ್ ನಾಯಕ್, ತಾಯಿ ವೀಣಾ ಜಿ. ನಾಯಕ್ ಹಾಗೂ ಸುವಿಧಾ ಹೋಮ್ಸ್ ಆಡಳಿತ ಮಂಡಳಿದ್ದಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಲಾಸ್ ನಾಯಕ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ.


ಈ ಮಧ್ಯೆ, ಮೂರು ಪ್ರಕರಣಗಳಲ್ಲಿ ಉಡುಪಿ ನ್ಯಾಯಾಲಯ ಘೋಷಿಸಿದ ಪರಿಹಾರದ ಅರ್ಧದಷ್ಟು ಮೊತ್ತವನ್ನು ಠೇವಣಿ ಇಟ್ಟಿರುವ ಸುವಿಧಾ ಹೋಮ್ಸ್ ಆಡಳಿತಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಆ ಮೂರು ಪ್ರಕರಣಗಳಿಗೆ ತಡೆಯಾಜ್ಞೆ ನೀಡಿದೆ. ಇನ್ನು ಎರಡು ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಬೇಕಾಗಿದೆ.


ಸುವಿಧಾ ಹೋಮ್ಸ್‌ನಲ್ಲಿ ಅಸಮಾಧಾನದ ಹೊಗೆ...


ಈ ಮಧ್ಯೆ, ಸುವಿಧಾ ಹೋಮ್ಸ್‌ನ ಕಳಪೆ ಗುಣಮಟ್ಟದ ಬಗ್ಗೆ ಅಲ್ಲಿನ ಅಪಾರ್ಟ್‌ಮೆಂಟ್ ಮಾಲೀಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕಕ್ಕಸು ಗುಂಡಿ ಕಳೆದ ಆರು ದಿನಗಳಿಂದ ಲೀಕ್ ಆಗುತ್ತಿದ್ದು, ಬಿಲ್ಡರ್‌ನ ಬೇಜವಾಬ್ದಾರಿ ಹಾಗೂ ಕಳಪೆ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ.


ಸುವಿಧಾ ಹೋಮ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯ ಹೊಂದಿರುವ ಎಲ್ಲರೂ ಈ ಬಗ್ಗೆ ದೂರು ನೀಡುತ್ತಿದ್ದು, ಬಿಲ್ಡರ್ ಕೇವಲ ನಿರ್ವಹಣಾ ಶುಲ್ಕವನ್ನು ಮಾತ್ರ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ ಎನ್ನುವುದು ಇಲ್ಲಿನ ಮಾಲೀಕರ ಆಕ್ರೋಶದ ಮಾತಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu