-->

Theif become Icon | ಕಳ್ಳರಿಗೂ ಮಾನವೀಯ ಹೃದಯವಿದೆ!... ದೇವದೂತನಾದ ಮಾಮೂಲಿ ಅಡಿಕೆ ಕಳ್ಳನ ಕಥೆ: ಈಗ ಭಾರೀ ಟ್ರೆಂಡಿಂಗ್ ನ್ಯೂಸ್‌!

Theif become Icon | ಕಳ್ಳರಿಗೂ ಮಾನವೀಯ ಹೃದಯವಿದೆ!... ದೇವದೂತನಾದ ಮಾಮೂಲಿ ಅಡಿಕೆ ಕಳ್ಳನ ಕಥೆ: ಈಗ ಭಾರೀ ಟ್ರೆಂಡಿಂಗ್ ನ್ಯೂಸ್‌!




1992 ಮಾರ್ಚ್ 27 ರಂದು ಕೇರಳದ ಕೋಟಯಂನಲ್ಲಿರುವ ಪಯಸ್ ಟೆಂತ್ ಕಾನ್ವೆಂಟ್ ನ ಬಾವಿಯಲ್ಲಿ ಸಿಸ್ಟರ್ ಅಭಯ ಅವರ ಮೃತದೇಹ ಪತ್ತೆಯಾಯಿತು.


ಕಾನ್ವೆಂಟ್ ನಲ್ಲಿ ವಾಸಿಸುತ್ತಿದ್ದ ಅಭಯ ಅವರು ಕೋಟ್ಟಯಂ ಬಿ ಸಿ ಎಮ್ ಕಾಲೇಜಿನ ಹನ್ನೆರಡನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.

ಸಿಸ್ಟರ್ ಅಭಯ ಅವರದ್ದು ಆತ್ಮಹತ್ಯೆ ಅಂತ ಕಥೋಲಿಕ್ ಸಭೆಯವರು ವಾದಿಸಿ, ಪ್ರಕರಣವನ್ನು ಮುಚ್ಚಿ ಹಾಕಿತು.


ಆದರೆ, ಪ್ರಕರಣದಲ್ಲಿ ಏನೋ ನಿಗೂಢತೆ ಅಡಗಿದೆ ಅಂತ ಆರೋಪಿಸಿ ಆ್ಯಕ್ಷನ್ ಕೌನ್ಸಿಲ್ ರಚಿಸಲಾಯಿತು...


ಅಲ್ಲಿಂದಾಚೆ ಪ್ರಕರಣವನ್ನು ಭೇದಿಸುವ ಕಾರ್ಯಾಚರಣೆಗಳು ನಡೆಯುತ್ತಲೇ ಇದ್ದವು...

ಲೋಕಲ್ ಪೋಲೀಸರು, ಕ್ರೈಮ್ ಬ್ರಾಂಚ್, ಕೊನೆಗೆ ಸಿ ಬಿ ಐ ಕೂಡಾ ಕಾರ್ಯಾಚರಣೆಯನ್ನು ಮಾಡ ಹೊರಟಿತು.. ಹಲವು ಸಾಕ್ಷೀದಾರರು ಹಣದ ಅಮಿಷಕ್ಕೆ ಮಾತು ಬದಲಾಯಿಸಿ , ಆ ಸಾಕ್ಷಿಯಿಂದ ಹಿಂದೆ ಸರಿದರು...


ಸಿಸ್ಟರ್ ಅಭಯ ಅವರ ಹತ್ತಕ್ಕಿಂತಲೂ ಹೆಚ್ಚು ಫೋಟೋಗಳು ಇದ್ದವಾದರೂ

ಸಿ ಬಿ ಐ ಗೆ ಸಿಕ್ಕಿದ್ದು ಆರು ಫೋಟೋಗಳು ಮಾತ್ರವಾಗಿತ್ತು.


ಆಕೆಯ ಕತ್ತಲ್ಲಿ ಆದ ಗಾಯಗಳಿರುವ ಮುಖ್ಯ ಫೋಟೋಗಳು ಕಾಣೆಯಾದವು...


ನಿಖರವಾದ ಸಾಕ್ಷ್ಯಾಧಾರಗಳಿಲ್ಲದ್ದರಿಂದ ಸಿಬಿಐಯು ನ್ಯಾಯಾಲಯದಲ್ಲಿ ಕೇಸನ್ನು ಕ್ಲೋಸ್ ಮಾಡಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿತು... ಸಿಬಿಐ ಯ ಅರ್ಜಿಯನ್ನು ಸ್ವೀಕರಿಸದ ನ್ಯಾಯಾಲಯವು ಆ ಪ್ರಕರಣದ ಪುನರ್ ಪರೀಶೀಲನೆ ನಡೆಸಲು ಆಜ್ಞಾಪಿಸಿತು.


ಬೆದರಿಕೆಗಳ ನಡುವೆಯೂ ಕೆಚ್ಚೆದೆಯಿಂದ ಖಡಕ್ಕಾಗಿ ನಿಂತ ಮೂರನೆಯ ಸಾಕ್ಷಿದಾರ ಮತ್ತು ಕಳ್ಳನಾದ ಅಡಿಕೆ ರಾಜುವಿನ ಹೇಳಿಕೆಗಳು ಮತ್ತು ಫೊರೆನ್ಸಿಕ್ ರಿಪೋರ್ಟ್ ಗಳ ಆಧಾರದಲ್ಲಿ ಸಿಸ್ಟರ್ ಅಭಯರದ್ದು ಕೊಲೆ ಎಂಬುದನ್ನು ಸಾಬೀತು ಪಡಿಸಲು ಸಿಬಿಐ ಗೆ ಸಹಾಯವಾಯಿತು...

ಮೂರನೆಯ ಸಾಕ್ಷೀದಾರನು ಸಣ್ಣಪುಟ್ಟ ಕಳ್ಳತನವನ್ನು ಮಾಡಿ ಆರು ಮಕ್ಕಳಡಗಿರುವ ತನ್ನ ಕುಟುಂಬವನ್ನು ಮುನ್ನಡೆಸುತ್ತಿದ್ದ...


ಅಡಿಕೆ, ತೆಂಗಿನಕಾಯಿ, ಬಾಳೆಗೊನೆ, ಸಣ್ಣ ಪುಟ್ಟ ಕಬ್ಬಿಣದ ಸರಳುಗಳನ್ನು ಕಳ್ಳತನ ಮಾಡುತ್ತಿದ್ದರಿಂದ ಆತನಿಗೆ ಅಡಿಕೆ ರಾಜು ಎಂಬ ಅಡ್ಡ ಹೆಸರು ಬಂತು...


ಎಂದಿನಂತೆ 1992 ಮಾರ್ಚ್ 27 ರಂದು ಬೆಳಗಿನ ಜಾವ ಮೂರುವರೆ ಗಂಟೆಯ ಸಮಯದಲ್ಲಿ ಅಡಿಕೆ ರಾಜು ಕಾನ್ವೆಂಟ್ ಗೆ ಕಳ್ಳತನ ಮಾಡಲು ಹೋಗಿದ್ದ.

ಕಾನ್ವೆಂಟ್ ನ ಹಿಂಭಾಗದಲ್ಲಿ ಫಾದರ್ ಥಾಮಸ್ ಕೊಟ್ಟೂರ್, ಸಿಸ್ಟರ್ ಸೆಫಿ , ಮತ್ತು ಜೋಸ್ ಪುತ್ತುಕಾಯಿಲ್ ಅವರುಗಳನ್ನು ಮರೆಯಲ್ಲಿ ನಿಂತು ನೋಡುತ್ತಾರೆ.


ರಾತ್ರಿ ಅಥವಾ ಬೆಳಗಿನ ಜಾವ ನೀರು ಕುಡಿಯಲೆಂದು ಸಿಸ್ಟರ್ ಅಭಯಾ ಅವರು ಕಾನ್ವೆಂಟ್ ನ ಕಿಚನ್ ಗೆ ಬರುತ್ತಾರೆ. ಅಲ್ಲಿ ಫಾದರ್ ಥಾಮಸ್ ಮತ್ತು ಸಿಸ್ಟರ್ ಸೆಫಿ ಅವರು ಸರಸವಾಡುತ್ತಿರುವುದನ್ನು ನೋಡುತ್ತಾರೆ... ಸಿಸ್ಟರ್ ಅಭಯ ಅವರು ಮುಂದೆ ನಮಗೆ ಸಮಸ್ಯೆಯಾಗಬಹುದು ಎಂದು ಅರಿತ ಫಾದರ್ ಥಾಮಸ್ ಮತ್ತು ಸಿಸ್ಟರ್ ಸೆಫಿ ಇಬ್ಬರೂ, ಕೊಡಲಿಯಿಂದ ಸಿಸ್ಟರ್ ಅಭಯಾ ಅವರ ತಲೆಗೆ ಬಡಿದು ಕೊಂದು ಮೃತದೇಹವನ್ನು ಬಾವಿಯೊಳಗೆ ಎಸೆದಿದ್ದರು....


ದೇವರ ದೂತರು ಅಂತ ಹೇಳುವ ಬಿಳಿ ಬಟ್ಟೆ ಧರಿಸಿದ ನರರಾಕ್ಷಸರಿಗಿಂತಲೂ , ಅಡಿಕೆ ರಾಜು ಅವರೇ ನಿಜವಾದ ದೈವದೂತರಾಗಿದ್ದಾರೆ ಅಂದರೆ ತಪ್ಪಾಗಲಾರದು.


ಕಳ್ಳತನಕ್ಕೆ ಹೋಗಿದ್ದ ಕಳ್ಳನೊಬ್ಬ ಸಿಸ್ಟರ್ ಅಭಯ ಅವರ ಪರವಾಗಿ ತಾನು ನೋಡಿದ್ದನ್ನು, ಮೊದಲಿನಿಂದಲೂ ಈ ಮೊನ್ನೆಯ ಬುದವಾರದವರೆಗೂ, ತಾನು ಕಣ್ಣಾರೆ ನೋಡಿರೋದನ್ನು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿರುವುದರಿಂದ 28 ವರ್ಷಗಳ ನಂತರ ಸಿಸ್ಟರ್ ಅಭಯ ಅವರಿಗೆ ನ್ಯಾಯ ಸಿಗುವಂತಾಗಿದೆ...


ಥಾಮಸ್ ಮತ್ತು ಸೆಫಿ ಎಂಬ ಕೊಲೆಗಟುಕರಿಗೆ ಐದೈದು ಲಕ್ಷ ರುಪಾಯಿ ದಂಡ ಮತ್ತು ಜೀವಾವದಿ ಶಿಕ್ಷೆಯನ್ನು ವಿಧಿಸಲಾಗಿದೆ.


ಅಡಿಕೆ ರಾಜು ಇರೋದು ಕೇವಲ ಮೂರು ಸೆಂಟ್ಸ್ ಜಾಗದಲ್ಲಿರುವ ಚಿಕ್ಕ ಮನೆಯಲ್ಲಿ... ಸಾಕ್ಷಿಯಿಂದ ಹಿಂದೆ ಸರಿಯಲು ಆತನಿಗೆ ಹಲವರು ಕೋಟಿ ಕೋಟಿಯ ಆಮಿಷಗಳನ್ನು ಒಡ್ಡಿದರು...


ಮಕ್ಕಳ ವಿದ್ಯಾಭ್ಯಾಸ, ಹೊಸ ಮನೆ ನಿರ್ಮಾಣ, ಕೋಟಿ ಹಣ... ಕೊಡಲು ಮುಂದಾದರು.


ಆದರೆ, ಯಾವುದೇ ಅಮಿಷಕ್ಕೆ ಮಣಿಯದೆ, ಯಾವುದೇ ಬೆದರಿಕೆಗಳಿಗೆ ಜಗ್ಗದೆ, ಸಿಸ್ಟರ್ ಅಭಯ ಎಂಬ ಹೆಣ್ಣುಮಗಳಿಗೆ ನ್ಯಾಯವನ್ನು ದೊರಕಿಸಿಕೊಡುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.


ಹೌದು ವೃತ್ತಿಜೀವನದಲ್ಲಿ ಸಂಸಾರದ ಜಟಕಾಬಂಡಿಯನ್ನು ದೂಡಲು, ಕಳ್ಳತನವನ್ನು ಕಾಯಕವನ್ನಾಗಿ ಮಾಡಿದ್ದ ಅಡಿಕೆ ರಾಜುವವರು ನಿಷ್ಠಾವಂತ ಕಳ್ಳನಾಗಿದ್ದರು...


ಕ್ರಮೇಣ ಕಳ್ಳತನವನ್ನು ಬಿಟ್ಟು ಮರದ ವ್ಯಾಪಾರ ಮಾಡುತ್ತಾ ಬದುಕುತ್ತಿದ್ದಾರೆ...


ನಾನು ಈ ಕಳ್ಳನ ಅಭಿಮಾನಿಯಾಗಿದ್ದೇನೆ. ಯಾಕೆಂದರೆ, ಒಬ್ಬಾಕೆ ಹೆಣ್ಣುಮಗಳನ್ನು ತನ್ನ ಮಗಳಂತೆ ಕಂಡು , ನ್ಯಾಯವನ್ನು ದೊರಕಿಸಿಕೊಟ್ಟ ದೊಡ್ಡ ವ್ಯಕ್ತಿತ್ವವಿರುವ ಮನುಷ್ಯ...


ರಾಜು ಅವರು ಹೇಳುತ್ತಾರೆ - ಇಂದು ನನ್ನ ಮಗಳಿಗೆ ನ್ಯಾಯ ಸಿಕ್ಕಿದೆ. ಆಕೆಯ ಆತ್ಮವು ಖುಷಿಪಡುತ್ತಿರಬಹುದು.


ನಾನು ತುಂಬಾ ಸಂತೋಷವಾಗಿದ್ದೇನೆ..


ಹೆತ್ತು ಹೊತ್ತು ಸಾಕಿ ಸಲಹಿ ಬೆಳೆಸಿದ ಹೆಣ್ಣುಮಗಳೊಬ್ಬಳು ಏಕಾಏಕಿ ಇಲ್ಲದಾಗುವಾಗ ಆ ನೋವು ಯಾರಿಂದ ತಾನೇ ಸಹಿಸೋದಕ್ಕೆ ಸಾಧ್ಯ..? ಆ ನೋವನ್ನು ನಾನು ಅರ್ಥ ಮಾಡಿಕೊಂಡು ಕೊನೆಯವರೆಗೂ, ಸಾಕ್ಷೀದಾರನಾಗಿಯೇ ಇದ್ದು ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೆ.


ಇಂದು ಅಡಿಕೆ ರಾಜು ಅವರು ದೊಡ್ಡ ಕಳ್ಳನಾಗಿದ್ದಾರೆ...


ಹೌದು ಕೋಟ್ಯಾಂತರ ಮಂದಿಯ ಹೃದಯವನ್ನು ಕದ್ದ ಕಳ್ಳ ಅಡಿಕೆ ರಾಜು....

ನಾವು ಯಾವತ್ತೂ ಕಳ್ಳ, ಕುಡುಕ ಅಂತ ಯಾರನ್ನೂ ಕಡೆಗಣಿಸಬಾರದು. ಯಾಕೆಂದರೆ ಅಂತಹವರಲ್ಲೂ ಶುದ್ದವಾದ ಹೃದಯವಿರುತ್ತದೆ.

Ads on article

Advertise in articles 1

advertising articles 2

Advertise under the article