ಬೆಂಗಳೂರು: ಕೆಲವರಿಗೆ ಒಂದು ಹೊತ್ತಿನ ಊಟ ಬಿಡಲಾಗುತ್ತದೆ, ಆದರೆ ಮೊಬೈಲ್ ಇಲ್ಲದೆ ಒಂದು ದಿನ ಇರುವುದು ಕಷ್ಟ. ಇಂತಹ ಮೊಬೈಲ್ ಕಳೆದು ಹೋದಲ್ಲಿ ಎಷ್ಟು ಸಂಕಟ ಅನುಭವಿಸಿಯಾರು ಒಮ್ಮೆ ಊಹಿಸಿಕೊಳ್ಳಿ. ಆದರೆ ಇದೀಗ ಮೊಬೈಲ್ ಕಳೆದುಹೋದಲ್ಲಿ ಚಿಂತಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಟೆಲಿಕಾಂ ಇಲಾಖೆಯಡಿ ಅಭಿವೃದ್ಧಿಪಡಿಸಿರುವ 'ಸಂಚಾರ್ ಸಾಥಿ ಪೋರ್ಟಲ್' ಪೊಲೀಸರ ತನಿಖೆಗೆ ಶಕ್ತಿ ನೀಡುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲೇ 4ಲಕ್ಷಕ್ಕೂ ಅಧಿಕ ಮೊಬೈಲ್ ಫೋನ್ಗಳನ್ನು ಪತ್ತೆಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ!
'ಸಂಚಾರ್ ಸಾಥಿ ಪೋರ್ಟಲ್' ಹೇಗೆ ಕೆಲಸ ಮಾಡುತ್ತದೆ ಎಂದರೆ ಮೊಬೈಲ್ ಕಳ್ಳತನವಾದ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ FIR ದಾಖಲಿಸಬೇಕು. ಬಳಿಕ FIR ಪ್ರತಿ, ಮೊಬೈಲ್ IMEI ಸಂಖ್ಯೆ, ಮೊಬೈಲ್ ಖರೀದಿ ಬಿಲ್, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಗುರುತಿನ ಚೀಟಿ ಸಂಚಾರ್ ಸಾಥಿ ಪೋರ್ಟಲ್ ತೆರೆದು ಅಪ್ಲೋಡ್ ಮಾಡಬೇಕು. ಜೊತೆಗೆ ಮೊಬೈಲ್ ಯಾವ ಕಂಪನಿ, ಎಲ್ಲಿ ಮತ್ತು ಹೇಗೆ ಕಳ್ಳತನವಾಯಿತು ಎಂಬ ವಿವರ ದಾಖಲಿಸಬೇಕು. ನೀವು ನೀಡಿದ ಇನ್ನೊಂದು ಮೊಬೈಲ್ ನಂಬರ್ಗೆ OTP ಬರುತ್ತದೆ, ಅದನ್ನು ನಮೂದಿಸಿದ ಬಳಿಕ ಪ್ರಕ್ರಿಯೆ ಪೂರ್ಣ.
ಅರ್ಜಿ ಪರಿಶೀಲನೆಯ ನಂತರ ಮೊಬೈಲ್ ಬ್ಲಾಕ್ ಆಗುತ್ತದೆ. ಯಾರಾದರೂ ನಿಮ್ಮ ಫೋನ್ಗೆ ಸಿಮ್ ಕಾರ್ಡ್ ಹಾಕಿದ ತಕ್ಷಣ ಆ ಸಿಮ್ನ ನಂಬರ್ ಮತ್ತು ಲೊಕೇಷನ್ ಪೊಲೀಸರಿಗೆ ತಿಳಿದುಬಿಡುತ್ತದೆ. ಮೊಬೈಲ್ ವಾಪಸ್ ಸಿಕ್ಕ ತಕ್ಷಣ ಪೋರ್ಟಲ್ನಲ್ಲಿ 'Unblock Found Mobile' ಆಯ್ಕೆಗೆ ಹೋಗಿ ಅಧಿಕೃತ ಮಾಹಿತಿ ದಾಖಲಿಸಿದ ಬಳಿಕ ಮೊಬೈಲ್ ಮತ್ತೆ ಕಾರ್ಯ ನಿರ್ವಹಿಸುತ್ತದೆ. ಅದರ ಜೊತೆಗೆ ನಿಮ್ಮ ಆಧಾರ್ ನಂಬರ್ ಮೂಲಕ ನೋಂದಣಿಯಾದ ಎಷ್ಟು ಸಿಮ್ಗಳಿವೆ ಎಂದು ಕೂಡ ಪರಿಶೀಲಿಸಬಹುದು!
ದೇಶ ಮಟ್ಟದಲ್ಲಿ ಈ ಪೋರ್ಟಲ್ ಸಾಧನೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿಯವರೆಗೆ 33.1 ಲಕ್ಷ ಮೊಬೈಲ್ ಕಾರ್ಯಚರಣೆಯನ್ನು ನಿರ್ಬಂಧಿಸಲಾಗಿದೆ, 20 ಲಕ್ಷಕ್ಕೂ ಹೆಚ್ಚು ಮೊಬೈಲ್ ಪತ್ತೆಹಚ್ಚಲಾಗಿದ್ದು, 4 ಲಕ್ಷ 57 ಸಾವಿರ ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಮರಳಿ ನೀಡಲಾಗಿದೆ! ಮೊಬೈಲ್ ಕಳ್ಳತನವಾದ ತಕ್ಷಣ ಧೃತಿಗೆಡದೆ ಸಂಚಾರ್ ಸಾಥಿ ಪೋರ್ಟಲ್ ಬಳಸಿ.