ಕಾಟಿಪಳ್ಳ: ಮಸೀದಿಗೆ ಕಲ್ಲು ತೂರಾಟ ನಡೆಸಿದ ಐವರು ಅರೆಸ್ಟ್


ಮಂಗಳೂರು: ನಗರದ ಸುರತ್ಕಲ್‌ನ ಕೃಷ್ಣಾಪುರ ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿರುವ ಮಸ್ಜಿದುಲ್ ಹುದಾ ಜುಮಾ ಮಸೀದಿಯ ಕಿಟಕಿಗೆ ಕಲ್ಲು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಆಶ್ರಯ ಕಾಲನಿ ನಿವಾಸಿ ಭರತ್, ಕಟ್ಲ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ, ಹಳೆಯಂಗಡಿ ಚೇಳಾಯರು ಖಂಡಿಗೆ ಪಾಡಿ ನಿವಾಸಿ ನಿತಿನ್, ಈಶ್ವರ ನಗರ ನಿವಾಸಿ ಮನು ಮತ್ತು ಮುಂಚೂರು ನಿವಾಸಿ ಸುಜಿತ್ ಎಂಬವರು ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ.

ರವಿವಾರ ರಾತ್ರಿ ಜನತಾ ಕಾಲನಿಯ ಸ್ಮಶಾನದ ಕಡೆಯಿಂದ ಎರಡು ಬೈಕ್‌ಗಳಲ್ಲಿ ಆಗಮಿಸಿದ ಕಿಡಿಗೇಡಿಗಳು ಮಸ್ಜಿದುಲ್ ಹುದಾ ಜುಮಾ ಮಸೀದಿಯ ಹಿಂಭಾಗದ ಕಿಟಕಿಗಳಿಗೆ ಕಲ್ಲು ತೂರಾಡಿದ್ದಾರೆ. ಬಳಿಕ ಒಂದು ಬೈಕ್ ನಲ್ಲಿದ್ದ ಮೂವರು ಗಣೇಶ ಕಟ್ಟೆಯ ಕಡೆ ತೆರಳಿದ್ದರು. ಮತ್ತೊಂದು ಬೈಕ್‌ನಲ್ಲಿದ್ದ ಮತ್ತಿಬ್ಬರು ವಾಪಸ್ ಸ್ಮಶಾನದ ಕಡೆಗೆ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

ಬಂಧಿತರ ಪೈಕಿ ಭರತ್ ಎಂಬಾತನ ವಿರುದ್ಧ ಹೊಡೆದಾಟಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು.
BREAKING NEWS
Loading latest news...
Join our WhatsApp Channel Powered By : Online Pudu