17 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಬ್ಯಾಂಕ್ ಮ್ಯಾನೇಜರ್ : ಶಾಕ್ ಆದ ಗ್ರಾಹಕರು


ಕೊಝಿಕ್ಕೋಡ್: ಬ್ಯಾಂಕ್ ಮ್ಯಾನೇಜರ್ ಓರ್ವನು ತನ್ನ ಬ್ಯಾಂಕ್ ಶಾಖೆಯಲ್ಲಿ ಗಿರವಿಯಿಟ್ಟಿದ್ದ 17 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ತಮಿಳುನಾಡಿನ ಮೆಟ್ಟುಪಾಳ್ಯಂ ಪತಿಸ್ಟ್ರೀಟ್ ನಿವಾಸಿ ಮಾಧಾ ಜಯಕುಮಾ‌ರ್ (34) ಆರೋಪಿ.

ಜಯಕುಮಾರ್ ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಶಾಖೆಯಲ್ಲಿ ಮ್ಯಾನೇಜ‌ರ್ ಆಗಿ ಸೇವೆ ಸಲ್ಲಿಸುತ್ತಿದ್ದ. ಈತ ಬ್ಯಾಂಕ್‌ನಲ್ಲಿ ಗ್ರಾಹಕರು ಗಿರವಿಯಿಟ್ಟಿದ್ದ 26 ಕೆಜಿಗಳಷ್ಟು ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಶಾಖೆಯಲ್ಲಿ ಮರು ಮೌಲ್ಯಮಾಪನ ಪ್ರಕ್ರಿಯೆ ನಡೆಸುತ್ತಿರುವ ಸಂದರ್ಭದಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಗ್ರಾಹಕರು ಗಿರವಿಯಿಟ್ಟಿದ್ದ ಅಸಲಿ ಚಿನ್ನವನ್ನು ನಕಲಿ ಚಿನ್ನದಿಂದ ಬದಲಾಯಿಸಿರುವುದು ಗೊತ್ತಾಗಿದೆ. ಈ ಸಂಬಂಧ ವಡಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್‌ನ ನೂತನ ವ್ಯವಸ್ಥಾಪಕ ವಿ.ಇರ್ಷಾದ್ ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ.

ಕಳೆದ ಮೂರು ವರ್ಷಗಳಿಂದ ವಡಕರ ಶಾಖೆಯ ವ್ಯವಸ್ಥಾಪಕರಾಗಿದ್ದ ಮಾಧಾ ಜಯಕುಮಾ‌ರ್ ಇತ್ತೀಚೆಗೆ ಜುಲೈನಲ್ಲಿ ಎರ್ನಾಕುಲಂನ ಪಲರಿವಟ್ಟಂ ಶಾಖೆಗೆ ವರ್ಗಾವಣೆಗೊಂಡಿದ್ದ. ಆದರೆ ಈತ ಶಾಖೆಯ ಕರ್ತವ್ಯಕ್ಕೆ ಹಾಜರಾಗಿಲ್ಲ. ಕಳೆದ ಜೂನ್ 13 ರಿಂದ ಜುಲೈ 6, 2024 ರ ನಡುವೆ ಗ್ರಾಹಕರು ಗಿರವಿ ಇಟ್ಟಿದ್ದ 42 ಖಾತೆಗಳಿಗೆ ಸಂಬಂಧಿಸಿದ ಚಿನ್ನವನ್ನು ಕದ್ದೊಯ್ಯಲಾಗಿದೆ. ವಡಕರ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸೆಕ್ಷನ್ 409 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu