ಬಿಟ್ ಕಾಯಿನ್ ಹಗರಣ: ವಿಚಾರಣೆಗೆ ಎಸ್ಐಟಿ ಮುಂದೆ ಹಾಜರಾದ ಕಾಂಗ್ರೆಸ್ ಮುಖಂಡ ಮುಹಮ್ಮದ್ ಹಾರಿಸ್ ನಲಪಾಡ್‌


ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಕಾಂಗ್ರೆಸ್ ಯುವ ಮುಖಂಡ ಮುಹಮ್ಮದ್ ಹಾರಿಸ್ ನಲಪಾಡ್‌ರನ್ನು ಬುಧವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಯಾನೆ ಶ್ರೀಕಿಯೊಂದಿಗೆ ನಂಟು ಹೊಂದಿದ್ದರು ಎಂಬ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನಲಪಾಡ್‌ಗೆ ನೋಟಿಸ್‌ ನೀಡಿತ್ತು. ಸಿಐಡಿಯ ಇ-ಪ್ರೊಕ್ಯೂರೆಂಟ್ ಜಾಲತಾಣ ಹ್ಯಾಕ್ ಮಾಡಿ 1 ಕೋಟಿ ವಂಚಿಸಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಐಪಿಎಸ್ ಅಧಿಕಾರಿ ವಂಶಿಕೃಷ್ಣ ಅವರ ಎದುರು ನಲಪಾಡ್ ಹಾಜರಾಗಿದ್ದಾರೆ.

2018ರಲ್ಲಿ ವಿದ್ವತ್ ಎಂಬಾತನ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಮುಹಮ್ಮದ್ ಹಾರಿಸ್ ನಲಪಾಡ್‌ರೊಂದಿಗೆ ಶ್ರೀಕಿಯೂ ಆರೋಪಿಯಾಗಿದ್ದ. ಇವರಿಬ್ಬರೂ ಪರಸ್ಪರ ಪರಿಚಯಸ್ಥರಾಗಿದ್ದರು. ಆದ್ದರಿಂದ ಇವರಿಬ್ಬರ ನಡುವೆ ಹಣಕಾಸು ವಹಿವಾಟು ನಡೆದಿದೆಯಾ? ಎಂಬ ಮಾಹಿತಿ ಸಂಗ್ರಹಿಸಲು ನಲಪಾಡ್ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಶ್ರೀಕಿಯ ಗೆಳತಿಯನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಬಂಧಿತನಾಗಿದ್ದಾಗ ಶ್ರೀಕಿಗೆ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಲ್ಯಾಪ್‌ಟಾಪ್ ನೀಡಿದ್ದರು. ಈ ವೇಳೆ ಕೆಲಸದ ವಿಚಾರವಾಗಿ ಹೊರಹೋಗಿ, ಹಣ ಜಮೆ ಮಾಡು ಎಂದು ಗೆಳತಿಗೆ ಮೇಲ್ ಮಾಡಿದ ಶ್ರೀಕಿ ಬಳಿಕ ಇಮೇಲ್ ಡಿಲೀಟ್‌ ಮಾಡುವಂತೆ ಸೂಚಿಸಿದ್ದ. ಇದರಂತೆ ಆಕೆ ಇಮೇಲ್ ಡಿಲೀಟ್ ಮಾಡಿದ್ದಳು. ಲ್ಯಾಪ್‌ಟಾಪ್ ಜಪ್ತಿ ಮಾಡಿ ಡೇಟಾ ರಿಟೀವ್ ಮಾಡಿದಾಗ ಶ್ರೀಕಿ ಇಮೇಲ್ ಮಾಡಿರುವುದು ಗೊತ್ತಾಗಿತ್ತು. ಈ ಸಂಬಂಧ ಯುವತಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಲಾಗಿತ್ತು.