ಮಹಾಪ್ರಮಾದ- ಕೇರಳದ ವೈದ್ಯಕೀಯ ಕಾಲೇಜಿನಲ್ಲಿ ಬೆರಳಿನ ಬದಲಿಗೆ ನಾಲಗೆಗೆ ಶಸ್ತ್ರಚಿಕಿತ್ಸೆ! Tongue Surgery



ಕ್ಯಾಲಿಕಟ್: ಕೇರಳದ  ಕ್ಯಾಲಿಕಟ್​ನ ವೈದ್ಯಕೀಯ ಕಾಲೇಜಿನಲ್ಲಿ 4 ವರ್ಷದ ಬಾಲಕಿಯ ಕೈ ಬೆರಳಿನ ಬದಲಿಗೆ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿದ ಮಹಾ ಪ್ರಮಾದ ಸಂಭವಿಸಿದೆ.

ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಪ್ರಕರಣ ಇಂದು ನಡೆದಿದ್ದು,  ಈ ಬಗ್ಗೆ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ತಕ್ಷಣವೇ ತನಿಖೆಗೆ ಸೂಚಿಸಿದ್ದಾರೆ. ಬಾಲಕಿಯ ಪೋಷಕರಿಗೆ ಕ್ಷಮೆ ಕೋರಲಾಗಿದೆ.


 ಕೋಯಿಕ್ಕೋಡ್‌ನ ಚೆರುವನ್ನೂರಿನವರಾದ ನಾಲ್ಕು ವರ್ಷದ ಬಾಲಕಿಯ ಕೈಯಲ್ಲಿ 6ನೇ ಬೆರಳು ಹೆಚ್ಚುವರಿಯಾಗಿ ಬೆಳೆದಿತ್ತು. ಅದನ್ನು ತೆಗೆಯಲು ಕ್ಯಾಲಿಕಟ್​ ವೈದ್ಯಕೀಯ ಆಸ್ಪತ್ರೆಗೆ ಬಾಲಕಿಯನ್ನು ಕರೆತರಲಾಗಿತ್ತು. ಇಂದು ಬೆಳಗ್ಗೆ 9 ಗಂಟೆಗೆ ಆಕೆಯನ್ನು ಆಪರೇಷನ್​ ಥಿಯೇಟರ್​ಗೆ ಕರೆದೊಯ್ಯಲಾಗಿದೆ.

ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಆಕೆಯನ್ನು ಕೋಣೆಯೊಂದರಲ್ಲಿ ಕರೆತಂದಾಗ, ಬಾಯಿಯಲ್ಲಿ ಹತ್ತಿ ತುರುಕಿದ್ದನ್ನು ಬಾಲಕಿಯ ಪೋಷಕರು ಪ್ರಶ್ನಿಸಿದ್ದಾರೆ. ಆಗ ವೈದ್ಯರು, ನಾಲಿಗೆಯಲ್ಲಿ ರಂಧ್ರವಿದ್ದ ಕಾರಣ ಆಪರೇಷನ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 


ಇದರಿಂದ ಆತಂಕಗೊಳಗಾದ ಪೋಷಕರು ತನ್ನ ಮಗಳಿಗೆ ನಾಲಿಗೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಆರನೇ ಬೆರಳು ತೆಗೆಯುವ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು ಎಂದಿದ್ದಾರೆ.

ಆ ಸಂದರ್ಭದಲ್ಲಿ ವೈದ್ಯರಿಗೆ ತಮ್ಮ ತಪ್ಪಿನ ಅರಿವಾಗಿದೆ.


 ತಕ್ಷಣವೇ ವೈದ್ಯರು ತಮ್ಮ ತಪ್ಪಿಗೆ ಬಾಲಕಿಯ ಹೆತ್ತವರ ಬಳಿ ಕ್ಷಮೆಯಾಚಿಸಿದರು. ಕೈ ಬೆರಳ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿ ಭಾರೀ ಪ್ರಮಾದಕ್ಕೆ ಕಾರಣವಾದ ವೈದ್ಯರ ವಿರುದ್ಧ ವೈದ್ಯಕೀಯ ಕಾಲೇಜಿನ ಅಧೀಕ್ಷಕರು ತನಿಖೆಗೆ ಸೂಚಿಸಿದ್ದಾರೆ.