-->
1000938341
ಮಂಗಳೂರು: ಅಮಾಯಕನನ್ನು ಹತ್ಯೆಗೈದಿರುವ ಅಪರಾಧ ಸಾಬೀತು- ನಾಲ್ವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಅಮಾಯಕನನ್ನು ಹತ್ಯೆಗೈದಿರುವ ಅಪರಾಧ ಸಾಬೀತು- ನಾಲ್ವರಿಗೆ ಜೀವಾವಧಿ ಶಿಕ್ಷೆ


ಮಂಗಳೂರು: ದಾರಿ ಕೇಳುವ ನೆಪದಲ್ಲಿ ರಿಕ್ಷಾವನ್ನು ಅಡ್ಡಗಟ್ಟಿ ಅಮಾಯಕನೊಬ್ಬನನ್ನು ಹತ್ಯೆ ಮಾಡಿರುಚ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಂಟ್ವಾಳ ಮಂಜಿ ನಿವಾಸಿ ವಿಜೇತ್ ಕುಮಾರ್ (22), ಬಡಗ ಉಳಿಪ್ಪಾಡಿ ನಿವಾಸಿ ಕಿರಣ್ ಪೂಜಾರಿ (24), ವಾಮಂಜೂರು ತಿರುವೈಲ್ ನಿವಾಸಿ ಅನೀಶ್ ಯಾನೆ ಧನು (23), ಮಂಚಿಗುತ್ತು ನಿವಾಸಿ ಅಭಿ ಯಾನೆ ಅಭಿಜಿತ್ (24) ಶಿಕ್ಷೆಗೊಳಗಾದ ಅಪರಾಧಿಗಳು. 


2015ರ ಆ.6ರಂದು ರಾತ್ರಿ ಮೊಹಮ್ಮದ್ ಮುಸ್ತಫಾ ಎಂಬವರು ಮೆಲ್ಕಾರ್ ಬಳಿ ತಮ್ಮ ಪತ್ನಿಯೊಂದಿಗೆ ರಿಕ್ಷಾದಲ್ಲಿ ಮೆಲ್ಕಾರ್ ನಿಂದ ಮುಡಿಪು ಕಡೆಗೆ ಪ್ರಯಾಣಿಸುತ್ತಿದ್ದರು. ಆಗ 2 ಬೈಕ್‌ಗಳಲ್ಲಿ ನಾಲ್ವರು ಆಗಮಿಸಿ ರಿಕ್ಷಾ ಡ್ರೈವರಲ್ಲಿ ಬೊಳ್ಳಾಯಿಗೆ ಹೋಗುವ
ರಸ್ತೆ ಕುರಿತು ವಿಚಾರಿಸಿದ್ದಾರೆ. ದಾರಿ ತೋರಿಸಿ ರಿಕ್ಷಾ ಮುಂದಕ್ಕೆ ಹೋಗಿದೆ. ಆರೋಪಿಗಳು ರಿಕ್ಷಾವನ್ನು ಹಿಂಬಾಲಿಸಿದ್ದಾರೆ. ರಾತ್ರಿ 10.45ರ ವೇಳೆ ಮುಡಿಪು ಮಾರ್ನಬೈಲು ಸಮೀಪದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪಿದಾಗ ಆಟೋರಿಕ್ಷಾವನ್ನು ಓವರ್ ಟೇಕ್ ಮಾಡಿ ಮತ್ತೆ ದಾರಿ ಕೇಳುವ ನೆಪದಲ್ಲಿ ಒಂದನೇ ಆರೋಪಿ ವಿಜೇತ್ ಕುಮಾರ್ ಎಂಬಾತ ಮುಹಮ್ಮದ್ ನಾಸಿರ್‌ರನ್ನು ತಲವಾರಿನಿಂದ ಕಡಿದು ತೀವ್ರ ಗಾಯಗೊಳಿಸಿದ್ದಾನೆ.

ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಿಸದೆ ಆ.7ರಂದು ಮೃತಪಟ್ಟಿದ್ದರು. ನಾಲ್ವರು ಆರೋಪಿಗಳು ಕೃತ್ಯವೆಸಗಿದ ಸಂದರ್ಭ ಹಾಕಿದ್ದ ಬಟ್ಟೆಯನ್ನು ರಕ್ತ ಕಲೆಗಳಿದ್ದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಗೆ ಎಸೆದು ಸಾಕ್ಷ್ಯಾಧಾರ ನಾಶಪಡಿಸಿದ್ದರು.

ಆರೋಪಿಗಳ ಪೈಕಿ ವಿಜೇತ್ ಕುಮಾರ್ ಮತ್ತು ನಾಲ್ಕನೇ ಆರೋಪಿ ಅಭಿಜಿತ್‌ಗೆ ಕೊಲ್ನಾಡ್ ಅಲಬೆ ಎಂಬಲ್ಲಿ 2015ರ ಆ.5ರಂದು ರಾತ್ರಿ 10.45ಕ್ಕೆ 5 ಮಂದಿ ಯುವಕರು ಹಲ್ಲೆ ನಡೆಸಿದ್ದರು. ಮರುದಿನ ರಾತ್ರಿಯೇ ಕೋಮು ದ್ವೇಷದಿಂದ ಅನ್ಯ ಸಮುದಾಯದ ಯುವಕನನ್ನು ಕೊಲೆ ಮಾಡುವ ದುರುದ್ದೇಶದಿಂದ ಆ.6ರಂದು ಕಿರಣ್ ಮತ್ತು ಅನಿಶ್‌ರನ್ನು ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕರೆಸಿಕೊಂಡು ಕೊಲೆ ಮಾಡುವ ಸಂಚಿನಂತೆ ಕೃತ್ಯವೆಸಗಿದ್ದಾರೆ. ಬಳಿಕ

ಪೊಲೀಸ್ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ತನಿಖೆ ផ, 120 (2), 341, 324,307, 302, 201 ಜತೆ 34ರನ್ವಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಒಟ್ಟು 29 ಸಾಕ್ಷಿದಾರರ ವಿಚಾರಣೆ ನಡೆಸಲಾಗಿದ್ದು, 40 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. 1ನೇ ಹೆಚ್ಚು ವರಿ ಜಿಲ್ಲಾ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ತೀರ್ಪು ಪ್ರಕಟಿಸಿದ್ದಾರೆ.ಸರಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಒಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.

ನಾಲ್ವರು ಆರೋಪಿಗಳಿಗೆ ಕಲಂ 302ರಡಿ ಸಹವಾಚಕ ಕಲಂ 120 (ಬಿ) ಅನ್ವಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ, ದಂಡ ತೆರಲು ವಿಫಲರಾದಲ್ಲಿ 1 ವರ್ಷ ಸಾದಾ ಸಜೆ, ಕಲಂ 307ರಡಿ ಸಹವಾಚಕ ಕಲಂ 120 (ಬಿ) ಅನ್ವಯ 5 ವರ್ಷ ಕಠಿಣ ಸಜೆ ಮತ್ತು ತಲಾ 5 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲವಾದರೆ 6 ತಿಂಗಳ ಸಾದಾ ಸಜೆ, ಕಲಂ 341 ಸಹವಾಚಕ ಕಲಂ 120 (ಬಿ) ಅನ್ವಯ 1 ತಿಂಗಳ ಸಾದಾ ಸಜೆ, ಕಲಂ 324 ಸಹವಾಚಕ ಕಲಂ 120 (ಬಿ)ನ್ವಯ 1ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಲಾಗಿದೆ. ಕಲಂ 324ರಡಿ ಸಹವಾಚಕ ಕಲಂ 120 (ಬಿ) ನ್ವಯ 1ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತ 1.20 ಲಕ್ಷ ರೂ.ಗಳನ್ನು ಮೃತ ನಾಸಿರ್ ಪತ್ನಿ ರಹಮಾತ್ ಯಾನೆ ರಮ್ಲತ್ ಅವರಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ಮೃತರ ಪತ್ನಿ ರಹಮತ್ ಯಾನೆ ರಮ್ಲತ್ ಅವರಿಗೆ ಮತ್ತು ಫಿರ್ಯಾದಿದಾರರ ಮುಸ್ತಫಾ ಅವರಿಗೆ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.

Ads on article

Advertise in articles 1

advertising articles 2

Advertise under the article