ಮದವೇರಿ ಮಾವುತನನ್ನೇ ತುಳಿದು ಸಾಯಿಸಿದ ದೇವಸ್ಥಾನದ ಆನೆ


ತಿರುವನಂತಪ್ಪುರಂ: ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಂ ತಾಲ್ಲೂಕಿನ ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡಿದ್ದ ಆನೆಯೊಂದು ಮದವೇರಿ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ  ನಡೆದಿದೆ.

ಅರವಿಂದ್ (26) ಮೃತ ಮಾವುತ. ಆನೆ ಮಾವುತನನ್ನು ತುಳಿದು ಸಾಯಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದ ಕುಂಜುಲಕ್ಷ್ಮೀ ಎಂಬ ಆನೆಗೆ ದೇವರ ಉತ್ಸವದಂಗವಾಗಿ ನೆಟ್ಟಿಪಟ್ಟಿಯನ್ನು ಕಟ್ಟಲಾಗುತ್ತಿತ್ತು. ಈ ವೇಳೆ ನೋಡ ನೋಡುತ್ತಿದ್ದಂತೆ ಆನೆಗೆ ಮದವೇರಿದೆ. ಆದ್ದರಿಂದ ಏಕಾಏಕಿ ಮೇಲಕ್ಕೆದ್ದ ಆನೆ ಮಾವುತ ಅರವಿಂದ್‌ನನ್ನು ಕೆಳಗೆ ಹಾಕಿ ತುಳಿಯಲು ಶುರು ಮಾಡುತ್ತದೆ. ಇದನ್ನು ನೋಡಿದ ಮತ್ತೋರ್ವ ಮಾವುತ ಆನೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ತಕ್ಷಣ ಗಾಯಾಳುವನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu