ಸುಳ್ಯ: ಸುಬ್ರಹ್ಮಣ್ಯ ಐನೆಕಿದುವಿನಲ್ಲಿ ನಕ್ಸಲರು ಬಂದಿರುವ ಶಂಕೆ - ಮೂವರಿದ್ದ ತಂಡ ಸ್ಥಳೀಯ ಮನೆಯೊಂದಕ್ಕೆ ಭೇಟಿ



ಮಂಗಳೂರು: ವಾರದ ಹಿಂದೆ ದ.ಕ. - ಕೊಡಗು ಗಡಿಭಾಗ ಕೂಜಿಮಲೆಯ ಎಸ್ಟೇಟ್‌ ಬಳಿಯ ಅಂಗಡಿಯೊಂದರಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದರು ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ಭಾಗದಲ್ಲಿ ನಕ್ಸಲ್‌ ನಿಗ್ರಹದಳ ನಿರಂತರ ಶೋಧ ನಡೆಸಿದ್ದರೂ ನಕ್ಸಲರು ಕಾಣಿಸಿರಲಿಲ್ಲ. ಇದೀಗ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಮೂವರು ಅಪರಿಚಿತರಿದ್ದ ತಂಡ ಐನೆಕಿದು ಗ್ರಾಮದ ಅಶೋಕ್ ಎಂಬವರ ಮನೆಗೆ ಭೇಟಿ ನೀಡಿದ್ದಾರೆ. ಮನೆಯವರೊಂದಿಗೆ ಸುಮಾರು ಒಂದು ಗಂಟೆಗಳ ಅಧಿಕ ಕಾಲ ತಂಡ ಮಾತುಕತೆ ನಡೆಸಿ ಎರಡು ಕೆಜಿಯಷ್ಟು ಅಕ್ಕಿ ಪಡೆದು, ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ತೆರಳಿದ್ದಾರೆ. ಮೂವರ ಬಳಿಯೂ ಶಸ್ತ್ರಾಸ್ತ್ರಗಳಿತ್ತು ಎಂದೂ ಹೇಳಲಾಗಿದೆ.

ಕಳೆದ ಬಾರಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನಲಾದ ಕೂಜಿಮಲೆ ಮತ್ತು ಶನಿವಾರ ಕಾಣಿಸಿದ್ದರೆನ್ನಲಾದ ಐನೆಕಿದು ನಡುವೆ ಸುಮಾರು 25 ಕಿ.ಮೀ.ನಷ್ಟೇ ಅಂತರವಿದೆ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತದ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಇಲ್ಲಿಂದ ಸೋಮವಾರಪೇಟೆ ಮತ್ತು ಇನ್ನೊಂದು ದಾರಿಯಾಗಿ ಗಾಳಿಬೀಡು ಸಂಪರ್ಕವನ್ನೂ ಮಾಡಬಹುದು. ಆ ಬಳಿಕ ಸಂಪಾಜೆ ಮೂಲಕ ಕೇರಳಕ್ಕೆ ಅರಣ್ಯದೊಳಗೆ ಸಂಪರ್ಕ ಸಾಧಿಸಲು ಸಾಧ್ಯ ಎನ್ನಲಾಗುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu