ಮಂಗಳೂರು: ಬಿಜೆಪಿಯಿಂದ ಅಭಿವೃದ್ಧಿ ಆಗಿಲ್ಲ, ಡೆಡ್ ಸಿಟಿ ಮಂಗಳೂರಿನ ಬದಲಾವಣೆಗೆ ಒತ್ತು ನೀಡಿದ್ದೇವೆ - ಡಿ.ಕೆ.ಶಿವಕುಮಾರ್


ಮಂಗಳೂರು: ದ.ಕ.ಜಿಲ್ಲೆಯಲ್ಲಿ ಧರ್ಮ ರಾಜಕೀಯವಿದೆ. ಬಿಜೆಪಿ ಅಭಿವೃದ್ಧಿ ಮಾಡ್ತಿಲ್ಲ. ಈ ಬಗ್ಗೆ ನಾವು ಹೊಸ ಅಲೋಚನೆ ಮಾಡ್ತೀವಿ. ಉದ್ಯೋಗ ಸೃಷ್ಟಿಸುತ್ತೇವೆ. ಸಂಜೆ 7 ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ. ಆದ್ದರಿಂದ ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡುತ್ತಿದ್ದೇವೆ. ಈ ಭಾಗದಲ್ಲಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಸಮಾವೇಶ ಮೈದಾನದ ಬಳಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ರಾಜಕೀಯದಲ್ಲಿ ಯಾವುದೂ ಶಾಶ್ವತ ಹಾಗೂ ಅಸಾಧ್ಯವಿಲ್ಲ. ರಾಜಕಾರಣ ಸಾಧ್ಯತೆಗಳ ಕಲೆ, ಹೀಗಾಗಿ ಇಲ್ಲಿ ಬದಲಾವಣೆಯಾಗುವ ವಿಶ್ವಾಸವಿದೆ. ಇಲ್ಲಿ ನಿರುದ್ಯೋಗವಿದೆ. ಇಲ್ಲಿನ ಯುವಕರು ಬೇರೆ ಕಡೆ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಸೌದಿ, ಬೆಂಗಳೂರು, ಮುಂಬೈ ಕಡೆ ಇಲ್ಲಿನವರು ಹೋಗುತ್ತಿದ್ದಾರೆ. ಇಲ್ಲಿ ಎಷ್ಟೇ ಶಿಕ್ಷಣ ಸಂಸ್ಥೆಗಳಿದ್ರೂ ಮಕ್ಕಳು ಡ್ರಾಪ್ ಔಟ್ ಆಗ್ತಿದಾರೆ. ಕರಾವಳಿಯಲ್ಲಿ ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್ ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಿದೆ. ದೇವಸ್ಥಾನಗಳಲ್ಲಿ ಯಾವ ರೀತಿ ಭಕ್ತಿಯಿಂದ ಇರುತ್ತಾರೋ ಅದು ವ್ಯವಹಾರಗಳಲ್ಲೂ ಇರಬೇಕು ಎಂದರು.

ಜೆರೋಸಾ ಶಾಲೆ ವಿಚಾರದಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಯಾರೇ ರಾಜಕೀಯ ಮಾಡಿದರೂ ಕಾನೂನು ಕೆಲಸ ಮಾಡಲಿದೆ. ಬಿಜೆಪಿಯವರು ಹೋರಾಟ ಮಾಡ್ತಾ ಇರಲಿ, ಕಾನೂನು ಕೆಲಸ ಮಾಡುತ್ತದೆ. ನಾನು ಪೊಲೀಸ್ ಕೆಲಸ ಮಾಡಲು ಆಗಲ್ಲ. ಅದನ್ನು ಪೊಲೀಸರು ಮಾಡ್ತಾರೆ.‌ ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ಬಿಜೆಪಿ ಮಾತನಾಡಿಲ್ಲ. ದ.ಕ.ಜಿಲ್ಲೆಗೂ ಕೊಟ್ಟಿದ್ದೇವೆ, ಮುಸ್ಲಿಮರಿಗೆ ಕೊಡಲೇ ಬಾರದಾ?.‌ಬಿಜೆಪಿ ರಾಜಕಾರಣ ಮಾಡ್ತಾ ಇದೆ, ಅವರು ಮಾಡಲಿ ಎಂದರು.

ಡಿ.ಕೆ.ಸುರೇಶ್ ಎದುರು ಜಯದೇವ ಆಸ್ಪತ್ರೆಯ ಮಂಜುನಾಥ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜಕಾರಣ ಮಾಡುತ್ತಿದೆ. ನಾನು ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಚುನಾವಣೆ ಎದುರಿಸಿದ್ದವನು. ಅನಿತಾ ಕುಮಾರಸ್ವಾಮಿಯವರ ವಿರುದ್ಧ ಕಣಕ್ಕಿಳಿದು ಡಿ.ಕೆ.ಸುರೇಶ್ ಗೆದ್ದಿದ್ದಾನೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ನಿಂತಾಗಲೂ ಅವನು ಗೆದ್ದಿದ್ದಾನೆ. ಪ್ರತೀ ಹಳ್ಳಿ, ರಸ್ತೆ, ಅಭಿವೃದ್ಧಿ, ಮನೆಗಳ ಅಭಿವೃದ್ಧಿಯಾಗಿದೆ.‌ ಆತನ ವಿರುದ್ಧ ಕುಮಾರಸ್ವಾಮಿ ನಿಂತರೂ ನನಗೆ ಯಾವುದೇ ಬೇಜಾರಿಲ್ಲ. ಯಾರೇ ನಿಂತರೂ ನಾವು ಸ್ವಾಗತಿಸುತ್ತೇವೆ ಎಂದರು.
BREAKING NEWS
Loading latest news...
Join our WhatsApp Channel Powered By : Online Pudu