ಮಂಗಳೂರು: ಅಜ್ಜನ ಮರಣಪ್ರಮಾಣ ಪತ್ರ ಪಡೆಯಲು 13 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗಲೇ ಗ್ರಾಮ ಆಡಳಿತ ಅಧಿಕಾರಿ ಲೋಕಾಯುಕ್ತ ಬಲೆಗೆ

ಮಂಗಳೂರು: ಅಜ್ಜನ ಮರಣ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದವರಿಂದ 13 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿ ವಿಜಿತ್ ಲೋಕಾಯುಕ್ತ ಬಲೆಗೆ ಬಿದ್ದವರು. 

ದೂರುದಾರರು ತಮ್ಮ ತಾಯಿಯ ಹೆಸರಿನಲ್ಲಿ ಚೇಳ್ಯಾರು ಎಂಬಲ್ಲಿದ್ದ 42 ಸೆಂಟ್ಸ್ ಜಮೀನಿನಲ್ಲಿ 5 ಸೆಂಟ್ಸ್ ಜಮೀನನ್ನು ಮಾರಾಟ ತೀರ್ಮಾನಿಸಿದ್ದರು. ಈ ಬಗ್ಗೆ ದಾಖಲಾತಿ ತಯಾರಿಸಿ ಜಮೀನು ಮಾರಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದ್ದಾರೆ. ಆಗ ತಾತನ ಮರಣ ಪ್ರಮಾಣ ಪತ್ರ ಮತ್ತು ಸಂತತಿ ನಕ್ಷೆ ಮಾಡಿಕೊಂಡು ಬನ್ನಿ ಎಂದು ತಿಳಿಸಿದ್ದರು. ಅದರಂತೆ ದೂರುದಾರರು ಸೆಪ್ಟೆಂಬರ್ ನಲ್ಲಿ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿಯ ಕಚೇರಿಗೆ ಹೋಗಿ ತಾತನ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.

ಆ ಬಳಿಕ ದೂರುದಾರರು ಎರಡು ಮೂರು ಸಲ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ತೆರಳಿ ದೃಢೀಕರಣ ಪತ್ರದ ಬಗ್ಗೆ  ಗ್ರಾಮ ಆಡಳಿತ ಅಧಿಕಾರಿ ವಿಜಿತ್ ರಲ್ಲಿ ವಿಚಾರಿಸಿದ್ದರು. ಆದರೆ ಯಾವುದೇ ಉತ್ತರ ನೀಡಿಲ್ಲ. ನ.20ರಂದು ಮತ್ತೆ ವಿಜಿತ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ತಮ್ಮ ತಾತನ ಮರಣದ ದೃಢೀಕರಣ ಪತ್ರ ರೆಡಿ ಇದೆ. ಬರುವಾಗ 15,000 ರೂ. ಹಣ ತರಬೇಕು ಎಂದು ತಿಳಿಸಿದ್ದರು. ಆದರೆ ಅಷ್ಟು ಹಣ ತನ್ನಲ್ಲಿಲ್ಲ ಎಂದಿದ್ದಾರೆ. ಅದಕ್ಕೆ 13,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇಂದು ವಿಜಿತ್ ರವರು ದೂರುದಾರರು 13,000 ರೂ. ಲಂಚದ ಹಣ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu