ಉಳ್ಳಾಲ: ನಡುಪದವು ಪರಿಸರದಲ್ಲಿ ಇಬ್ಬರಿಗೆ ಕಾಣಸಿಕ್ಕ ಚಿರತೆ - ಸ್ಥಳೀಯರಲ್ಲಿ ಮನೆಮಾಡಿದ ಆತಂಕ

ಉಳ್ಳಾಲ: ಇಲ್ಲಿನ ಕೊಣಾಜೆಯ ನಡುಪದವು ಎಂಬಲ್ಲಿಲ್ಲಿ ಗುರುವಾರ ರಾತ್ರಿ ಇಬ್ಬರಿಗೆ ಚಿರತೆಯೊಂದು ನೋಡಲು ಸಿಕ್ಕಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಆದರೆ ಈ ಬಗ್ಗೆ ತಮಗೆ ಯಾವುದೇ ದೂರು ಬಂದಿಲ್ಲವೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾತ್ರಿ 8 ಗಂಟೆಯ ವೇಳೆಗೆ ನಡುಪದವು ಬಳಿ ಚಿರತೆಯೊಂದು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಓಡಿರುವುದನ್ನು  ಸ್ಥಳೀಯರೊಬ್ಬರು ನೋಡಿದ್ದಾರೆ. ಇದನ್ನು ಅವರು ಸ್ಥಳೀಯರಲ್ಲಿ ತಿಳಿಸಿದ್ದಾರೆ. ಅದೇ ದಿನ ರಾತ್ರಿ 9.30ರ ವೇಳೆಗೆ ನಡುಪದವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕಾಲೇಜೊಂದರ ಪ್ರಾಧ್ಯಾಪಕರೊಬ್ಬರು ಊಟ ಮುಗಿಸಿ ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ಸಮೀಪದ ಲಾಡ್ಜ್ ರಸ್ತೆಯಲ್ಲಿ ಸ್ಕೂಟರೊಂದು ಸಾಗುತ್ತಿದ್ದಾಗ ಅದರ ಎದುರಿಗೇ ಚಿರತೆ ರಸ್ತೆಯಲ್ಲಿ ಓಡಿದ್ದನ್ನು ನೋಡಿ ಭಯಬೀತರಾಗಿದ್ದಾರೆ.

ಮನೆಗೆ ವಾಪಸಾದ ಅವರು ಸ್ಥಳೀಯರಿಗೆ ಚಿರತೆ ಇರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಚಿರತೆ ಪರಿಸರದಲ್ಲಿ ಕಾಣಸಿಕ್ಕಿರುವ ಬಗ್ಗೆ ಜನತೆ ಆತಂಕಕ್ಕೀಡಾಗಿದ್ದಾರೆ. ಘಟನೆ ಕುರಿತು ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿಯವರಲ್ಲಿ ಕೇಳಿದಾಗ ತಮಗೆ ಚಿರತೆಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೂ ಶನಿವಾರ ಬೆಳಗ್ಗೆ ನಡುಪದವು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu