ಮಂಗಳೂರು: ಲಾಕರ್ ನಲ್ಲಿದ್ದ 600 ಗ್ರಾಂ ಚಿನ್ನದೊಡವೆ ಲಪಟಾಯಿಸಿದ ಪತಿ- ಪತ್ನಿಯಿಂದ ದೂರು

ಮಂಗಳೂರು: ಮನೆಯ ಲಾಕರ್‌ನಲ್ಲಿಟ್ಟಿದ್ದ 600 ಗ್ರಾಂ (75 ಪವನ್ ತೂಕದ) ಚಿನ್ನಾಭರಣಗಳನ್ನು ಪತಿ ಕದ್ದೊಯ್ದು ಅಡವು ಇಟ್ಟುಕೊಂಡು ಸಾಲ ಪಡೆದಿದ್ದಾರೆಂದು ಎಂದು  ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ವ್ಯಾಸನಗರದ ಶಾಂತಲಾ ಆಶಿಯಾನ ಅಪಾರ್ಟ್ಮೆಂಟ್ ನಿವಾಸಿ ರೆನಿಶಾ ನೊರೊನ್ಹಾ ದೂರು ನೀಡಿದವರು. ಅವರು ತಮ್ಮ ಪತಿ ಮೊಹಮ್ಮದ್ ಇಲ್ಯಾಸ್ ಹಾಗೂ ಪತಿಯ ಸ್ನೇಹಿತ ಪ್ರಭಾಕರ್ ವಿರುದ್ಧ ನಗರದ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

ಪತಿ ಮೊಹಮ್ಮದ್ ಇಲಿಯಾಸ್ ಮತ್ತು ಪುತ್ರನೊಂದಿಗೆ ನಗರದ ವ್ಯಾಸನಗರದ ಶಾಂತಲಾ ಆಶಿಯಾನ ಅಪಾರ್ಟ್ಮೆಂಟ್ ನಲ್ಲಿ ತಾನು ವಾಸ್ತವ್ಯವಿದ್ದೆ. ಮದುವೆ ಸಂದರ್ಭ ತವರು ಮನೆಯಿಂದ 25 ಪವನ್ ಚಿನ್ನಾಭರಣ  ನೀಡಿದ್ದರು. ಬಳಿಕ ದುಡಿದು ಸಂಪಾದಿಸಿದ 5 ಪವನ್ ಚಿನ್ನಾಭರಣ, ತವರುಮನೆಯವರು ಉಡುಗೊರೆಯಾಗಿ ಕೊಟ್ಟಿದ್ದ 20 ಪವನ್ ಚಿನ್ನಾಭರಣ ಮತ್ತು ಮದುವೆ ಸಂದರ್ಭ ವರನ ಕಡೆಯವರು ಉಡುಗೊರೆಯಾಗಿ ನೀಡಿದ್ದ 25 ಪವನ್ ಚಿನ್ನಾಭರಣ ಸೇರಿ 75 ಪವನ್ ಚಿನ್ನಾಭರಣಗಳನ್ನು ಮನೆಯ ಲಾಕರ್‌ನಲ್ಲಿ ಇಟ್ಟಿದ್ದೆ. ಈ  ವಿಚಾರ ನನಗೆ ಮತ್ತು ಪತಿಗೆ ಮಾತ್ರ ತಿಳಿದಿತ್ತು. ಚಿನ್ನಾಭರಣಗಳು ಲಾಕರ್‌ನಲ್ಲಿ ಭದ್ರವಾಗಿದೆ ಎಂದು ಭಾವಿಸಿ ಅದನ್ನು ಪರಿಶೀಲಿಸಲು ಹೋಗಿರಲಿಲ್ಲ.

ಆದರೆ 2023ರ ಎಪ್ರಿಲ್‌ನಲ್ಲಿ ನನ್ನ ಹಾಗತ ಪತಿಯ ನಡುವೆ ಜಗಳವಾಗಿತ್ತು. ಆ ಬಳಿಕ ನಾನು ತವರು ಮನೆಯಲ್ಲಿ ವಾಸವಿದ್ದೇನೆ. ಪತಿಯು ವಾಸವಿದ್ದ ಫ್ಲ್ಯಾಟ್‌ಗೆ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದೆ. ಇತ್ತೀಚೆಗೆ ಫ್ಲ್ಯಾಟ್‌ಗೆ ಭೇಟಿ ನೀಡಿದ್ದಾಗ ನನ್ನ ಪತಿ ಒಂದು ವಾರದಿಂದ ಫ್ಲಾಟ್‌ಗೆ ಬಂದಿಲ್ಲವೆಂದು ಸೆಕ್ಯುರಿಟಿಯವರಿಂದ ತಿಳಿದು ಬಂದಿದೆ.‌ಈ ಬಗ್ಗೆ ತಾನು ಕರೆ ಮಾಡಿದಾಗ ಪತಿ, 'ನಾನು ಲಾಕ‌ರ್ ಸಮೇತ ಚಿನ್ನವನ್ನು ಒಯ್ದಿದ್ದೇನೆ. ನೀನು ಏನು ಮಾಡುತ್ತೀಯೋ ಮಾಡು' ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಗೆ 28.5 ಲಕ್ಷ ಹಣ ಪಡೆದಿದ್ದೇನೆ ಎಂದೂ ತಿಳಿಸಿದ್ದಾರೆ. ಸಾಲದ ಬಡ್ಡಿ ಕಟ್ಟಲಾಗದೇ ಪ್ರಭಾಕರ್ ಎಂಬಾತನಿಗೆ ಮೂರು ತಿಂಗಳ ಬಡ್ಡಿಯನ್ನು ಕಟ್ಟಲು ಹೇಳಿದ್ದೆ. ಅಡವಿಟ್ಟ ಚಿನ್ನದಲ್ಲಿ ಪ್ರಭಾಕರ್ 3 ತಿಂಗಳಿಗೆ ಮುನ್ನವೇ ಸುಮಾರು 1.12 ಲಕ್ಷದಷ್ಟು ಚಿನ್ನವನ್ನು ಬಿಡಿಸಿ, ಕರಗಿಸಿ ಮಾರಾಟ ಮಾಡಿದ್ದಾನೆ ಎಂದೂ ತಿಳಿಸಿದ್ದಾರೆ. ಆದ್ದರಿಂದ ಪತಿ ಇಲಿಯಾಸ್ ಮತ್ತು ಪ್ರಭಾಕರ ಎಂಬಾತನ ಮೇಲೆ ಕ್ರಮ ಜರುಗಿಸಬೇಕು ಎಂಬುದಾಗಿ ಮಹಿಳೆ ದೂರಿನಲ್ಲಿ ಒತ್ತಾಯಿಸಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu