ಶಾಲೆಯೊಳಗಡೆ ನಡೆಯಿತು ಪೈಶಾಚಿಕ ಕೃತ್ಯ: 10ರ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲನಿಂದ ರೇಪ್ - ಶಾಲೆಗೆ ಜಡಿಯಿತು ಬೀಗ 140 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ


ಬೆಂಗಳೂರು: 10ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ್ದ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್‌ನ ಶಾಲೆಗೆ ಬೀಗ ಜಡಿಯಲಾಗಿದೆ. ಈತ ಅನಧಿಕೃತವಾಗಿ ಶಾಲೆ ನಿರ್ಮಾಣ ಮಾಡಿದ್ದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶದ ಮೇರೆಗೆ ಶಾಲೆಯನ್ನು ಮುಚ್ಚಲಾಗಿದೆ. ಪರಿಣಾಮ ಈ ಶಾಲೆಯಲ್ಲಿ ಓದುತ್ತಿದ್ದ 140ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಆರೋಪಿ ಲ್ಯಾಂಬರ್ಟ್ ಪುಷ್ಪರಾಜ್ ಕೋರಮಂಗಲದಲ್ಲಿ ಶಾಲೆ ಕಟ್ಟಲು ಅನುಮತಿ ಪಡೆದಿದ್ದ. ಆದರೆ ಆತ ಅನಧಿಕೃತವಾಗಿ ವರ್ತೂರು ಸಮೀಪ ಶಾಲೆ ನಿರ್ಮಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಜಡಿಯಲಾಗಿದೆ. ಇದರಿಂದ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 140ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸದ್ಯ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರಿಸಲು ಅವಕಾಶ ನೀಡಲಾಗಿದ್ದು, ತಾವು ಹೇಳಿದ ಶಾಲೆಗೆ ಸರ್ಕಾರದಿಂದಲೇ ದರ ನಿಗದಿ ಮಾಡಿ ಸೀಟ್ ವ್ಯವಸ್ಥೆ ಮಾಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಪ್ರಾಂಶುಪಾಲ ಲ್ಯಾಂಬರ್ಟ್‌ ಪುಷ್ಪರಾಜ್ ತನ್ನದೇ ಶಾಲೆಯ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಾಲಕಿ ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಳು. ಈಕೆ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆಗಸ್ಟ್ 3ರಂದು ಬೆಳಗ್ಗೆ 8.30 ಕ್ಕೆ ಎಂದಿನಂತೆ ಬಾಲಕಿ ಶಾಲೆಗೆ ತೆರಳಿದ್ದಾಳೆ.11.30 ಕ್ಕೆ ತರಗತಿಯಿಂದ ವಿಶ್ರಾಂತಿ ಪಡೆಯಲೆಂದು ತನ್ನ ಕೊಠಡಿಗೆ ಕರೆದೊಯ್ದ ಪ್ರಾಂಶುಪಾಲ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಧ್ಯಾಹ್ನ 3.30ಕ್ಕೆ ಶಾಲೆಯಿಂದ ಮನೆಗೆ ವಾಪಸ್ಸಾಗಿದ್ದ ಬಾಲಕಿ, ತನ್ನ ತಾಯಿಗೆ ಹೊಟ್ಟೆ ನೋವು ಎಂದು ಹೇಳಿದ್ದಾಳೆ. ಆ ಬಳಿಕ ಸ್ನಾನ ಮಾಡಿಸಲೆಂದು ಕರೆದೊಯ್ದಾಗ ರಕ್ತದ ಕಲೆಗಳು ಕಂಡುಬಂದಿದೆ.

 ಇದೇ ವಿಚಾರವಾಗಿ ಮಗುವನ್ನು ತಾಯಿ ಕೇಳಿದಾಗ ನಡೆದ ಘಟನೆಯನ್ನು ಪುಟ್ಟ ಬಾಲಕಿ ವಿವರಿಸಿದ್ದಾಳೆ. ಘಟನೆ ಸಂಬಂಧ ಬಾಲಕಿಯ ತಾಯಿಯ ದೂರಿನ ಮೇರೆಗೆ ವರ್ತೂರು ಪೊಲೀಸ್‌ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಾಂಶುಪಾಲನನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಆತನ ಶಾಲೆಗೆ ಬೀಗ ಬಿದ್ದಿದೆ.
BREAKING NEWS
Loading latest news...
Join our WhatsApp Channel Powered By : Online Pudu