ಪುತ್ರನ ಕಾಲೇಜು ಶುಲ್ಕ ಪಾವತಿಗೆ ಬಸ್ ನಡಿಗೆ ಬಿದ್ದು ಪ್ರಾಣ ತೊರೆದ ತಾಯಿ


ಸೇಲಂ:ಪುತ್ರನ ಕಾಲೇಜು ಶುಲ್ಕ ಪಾವತಿಗಾಗಿ  ತಾಯಿಯೊಬ್ಬಳು ಬಸ್ ನಡಿಗೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಹೃದಯವಿದ್ರಾವಕಾರಿ ಘಟನೆಯೊಂದು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಪಾಪತಿ (46) ಮೃತಪಟ್ಟ ಮಹಿಳೆ. ಇವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೈರ್ಮಲ್ಯ ಕಾರ್ಯಕರ್ತಳಾಗಿ ಕೆಲಸ ಮಾಡುತ್ತಿದ್ದರು. ಪತಿಯನ್ನು ಕಳೆದುಕೊಂಡಿದ್ದ ಪಾಪತಿಯವರು ಪುತ್ರಿ ಹಾಗೂ ಪುತ್ರನೊಂದಿಗೆ ಸೇಲಂನಲ್ಲಿ ವಾಸವಾಗಿದ್ದರು. ಈಕೆಗೆ ಪುತ್ರನ ಕಾಲೇಜು ಶುಲ್ಕ ಪಾವತಿಸಲು 45,000 ರೂ ಅಗತ್ಯವಿತ್ತು.‌ ಅದಕ್ಕಾಗಿ ಅವರು ಹತ್ತಿರದ ಸಂಬಂಧಿಗಳು ಹಾಗೂ ಪರಿಚಯಸ್ಥರಲ್ಲಿ ಸಾಲವನ್ನು ಕೇಳಿದ್ದಳು.

ಆದರೆ ಈ ನಡುವೆ ಆಕೆಗೆ ಯಾರಿಂದಲೋ ಸ್ವಚ್ಛತಾ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟಲ್ಲಿ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಲಿದೆ ಎಂಬ ವಿಚಾರ ತಿಳಿದಿದೆ. ಇತ್ತ ಪುತ್ರನ ಕಾಲೇಜು ಶುಲ್ಕ ಭರಿಸಲಾಗದೆ ಒದ್ದಾಡುತ್ತಿದ್ದ ಪಾಪತಿ, ಖಿನ್ನತೆಗೊಳಗಾಗಿ ತನ್ನ ಪ್ರಾಣ ಬಿಡಲು ನಿರ್ಧರಿಸಿದ್ದಾಳೆ. 

ಆದ್ದರಿಂದ ಪಾಪಾತಿ ಚಲಿಸುತ್ತಿದ್ದ ಬಸ್ ಮುಂದೆ ಜಿಗಿಯಲು ಪ್ರಯತ್ನಿಸಿದ್ದು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾಳೆ. ಬಳಿಕ ಕೆಲವು ನಿಮಿಷಗಳ ಬಳಿಕ ಮತ್ತೊಂದು ಬಸ್ ತನ್ನ ಬಳಿಗೆ ಬಂದಾಗ ಅದೇ ಕೃತ್ಯವನ್ನು ಮುಂದುವರೆಸಿ ಪ್ರಾಣವನ್ನು ಬಿಟ್ಟಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ಪೊಲೀಸರೂ ಕೂಡ ವೀಡಿಯೋ ನೋಡಿ ಆಘಾತಕ್ಕೆ ಒಳಗಾಗಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.