ಪತ್ನಿಯನ್ನೇ ಅಪಹರಣ ಮಾಡಿದ ಸೈಕೋಪಾತ್ ಪತಿ
Wednesday, July 19, 2023
ತಮಿಳುನಾಡು: ಸೈಕೋಪಾತ್ ನಂತೆ ಅನುಮಾನಿಸುತ್ತಿದ್ದ ಪತಿಯಿಂದ ಬೇರ್ಪಟ್ಟು ತವರುಮನೆಯಲ್ಲಿ ನೆಲೆಸಿದ್ದ ಪತ್ನಿಯನ್ನು ಸಿನಿಮೀಯ ರೀತಿಯಲ್ಲಿ ಪತಿಯೇ ಅಪಹರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪುದುಕ್ಕೊಟ್ಟೈ ಜಿಲ್ಲೆಯ ನಿವಾಸಿ, ಪುರಸಭೆಯ ಕಚೇರಿಯಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಉಮಾಮಹೇಶ್ವರಿ ಅಪಹರಣಕ್ಕೊಳಗಾದವರು. ಪಲ್ಲವರಾಯನ್ ಪಥೈ ಗ್ರಾಮದ ನಿವಾಸಿ ಮಾರಿಮುತ್ತು ಅಪಹರಣ ಮಾಡಿದ ಸೈಕೋಪಾತ್ ಪತಿ.
ಉಮಾಮಹೇಶ್ವರಿಗೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಈತನ ಪರಿಚಯವಾಗಿದೆ. ಬಳಿಕ ಈ, ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಉಮಾಮಹೇಶ್ವರಿ ಮನೆಯವರ ವಿರೋಧದ ನಡುವೆಯೂ 2022ರ ಡಿಸೆಂಬರ್ 4ರಂದು ಮನೆತೊರೆದು ಮಾರಿಮುತ್ತುನನ್ನು ವಿವಾಹವಾದರು. ಬಳಿಕ ಇಬ್ಬರೂ ಮೈಲಾಡುತುರೈನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಮದುವೆಯಾದ ನಾಲ್ಕು ತಿಂಗಳೊಳಗೆ ಮಹೇಶ್ವರಿ ತನ್ನ ತಾಯಿ ಧನಲಕ್ಷ್ಮಿಯನ್ನು ಸಂಪರ್ಕಿಸಿ, ಪತಿ ತನ್ನನ್ನು ಸೈಕೋನಂತೆ ಅನುಮಾನಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಆದ್ದರಿಂದ ಧನಲಕ್ಷ್ಮಿ ತನ್ನ ಸಂಬಂಧಿಕರೊಂದಿಗೆ ಪುತ್ರಿಯ ಮನೆಗೆ ತೆರಳಿ ಮಾರಿಮುತ್ತುನಿಂದ ಉಮಾಮಹೇಶ್ವರಿಯನ್ನು ಬೇರ್ಪಡಿಸಿ ತವರುಮನೆಗೆ ಕರೆತಂದಿದ್ದಾರೆ. ಮಾರಿಮುತ್ತು ಮನೆಯಿಂದ ಹೊರಹೋಗಿ ನೀವು ಹೇಗೆ ಜೀವಂತವಾಗಿರುತ್ತೀರಿ ಎಂದು ನೋಡುತ್ತೇನೆ ಎಂದು ಅಂದು ಆತ ಬೆದರಿಕೆ ಹಾಕಿದ್ದ. ಆದರೆ ಜೂನ್ 20ರಂದು ಸಂಜೆ 7 ಗಂಟೆಗೆ ಕಾರಿನಲ್ಲಿ ಬಂದ ಮಾರಿಮುತ್ತು ತಾಯಿಯೊಂದಿಗೆ ಅರಯತೇರು ಎಂಬಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪತ್ನಿಯನ್ನು ಅಡ್ಡಗಟ್ಟಿ ಬಲವಂತವಾಗಿ ಅಪಹರಿಸಿದ್ದಾನೆ.
ಧನಲಕ್ಷ್ಮಿ ಅದೇ ರಾತ್ರಿ ಮೈಲಾಡುತುರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡಿ ಸುಮಾರು ಒಂದು ತಿಂಗಳು ಕಳೆದಿದೆ. ಆದರೆ ಪುತ್ರಿ ಈವರೆಗೆ ಸಿಗಲಿಲ್ಲ. ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ, ಅವರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಮಾರಿಮುತ್ತು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾಗ ಉಮಾ ಮಹೇಶ್ವರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಆಡಿಯೊ ರೆಕಾರ್ಡಿಂಗ್ ಅನ್ನು ಅವರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಜೊತೆಗೆ ಪುತ್ರಿಯನ್ನು ಮರಳಿ ಕರೆತರುವಂತೆ ವಿನಂತಿಸಿದ್ದಾರೆ.