ಸೋಲು ಆತ್ಮಾವಲೋಕನಕ್ಕೆ ಆತ್ಮಗಳೇ ಇಲ್ಲ; ನಮ್ಮವರಿಂದಲೇ ನಮ್ಮ ವಿರುದ್ಧ ಅಪಪ್ರಚಾರ: ಡಿವಿಎಸ್ ಅಳಲು

ಸೋಲು ಆತ್ಮಾವಲೋಕನಕ್ಕೆ ಆತ್ಮಗಳೇ ಇಲ್ಲ; ನಮ್ಮವರಿಂದಲೇ ನಮ್ಮ ವಿರುದ್ಧ ಅಪಪ್ರಚಾರ: ಡಿವಿಎಸ್ ಅಳಲು




ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಇದು ಅನಿರೀಕ್ಷಿತ. ರಾಜ್ಯದ ಜನತೆ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೆ ಅದೆಲ್ಲ ನಡೆಯುತ್ತಿತ್ತು. ಆದರೆ, ಈಗ ಆತ್ಮಾವಲೋಕನಕ್ಕೆ ಆತ್ಮಗಳೇ ಇಲ್ಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಳಲು ತೋಡಿಕೊಂಡಿದ್ದಾರೆ.


ಪಕ್ಷದ 13 ಮಂದಿ ಸಂಸದರನ್ನು ತೇಜೋವಧೆ ಮಾಡಲಾಗುತ್ತಿದೆ. ಇದು ನಮ್ಮದೇ ಪಕ್ಷದವರಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.


ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ನಮಗೆಲ್ಲ ವಯಸ್ಸಾಗಿದೆ. ಅನಾರೋಗ್ಯದಿಂದ ಟಿಕೆಟ್ ನೀಡುವುದಿಲ್ಲ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. 


ಚುನಾವಣೆಯಲ್ಲಿ ಪಕ್ಷ ಸೋಲು ಕಂಡಿರುವುದನ್ನೇ ನೆಪ ಮಾಡಿಕೊಂಡು ನಮ್ಮ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆದಿದೆ. ನಮ್ಮ ಪಕ್ಷದ ನಾಯಕರನ್ನು ನಿರ್ವೀರ್ಯರನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಆದ್ದರಿಂದ ಹಿರಿಯ ನಾಯಕರಿಂದ ಈ ಸ್ಪಷ್ಟನೆ ಅಗತ್ಯವಾಗಿ ಬೇಕಾಗಿದೆ ಎಂದು ಅವರು ಮನವಿ ಮಾಡಿದರು.


ಈ ರೀತಿಯ ಸುದ್ದಿಯನ್ನು ಯಾರು ಹರಿಯಬಿಟ್ಟಿರುವವರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ. 13 ಮಂದಿ ಕೆಲಸವೇ ಮಾಡಿಲ್ಲ. ಮುದುಕರಾಗಿದ್ದಾರೆ. ಇನ್ನು ಕೆಲವರು ಅನಾರೋಗ್ಯ ಪೀಡಿತರು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ರೀತಿಯಲ್ಲಿ ಮಾಧ್ಯಮಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ನಾವೆಲ್ಲ ಮತದಾರರಿಂದ ಗೆದ್ದು ಬಂದವರು. 12 ಸಂಸದರು ನನಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಗೊಂದಲಗಳಿಗೆ ಇತಿಶ್ರೀ ಹಾಡಬೇಕಾದವರು ಮಾತನಾಡುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.



ಇದಕ್ಕೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತದೆ ಎಂದು ಅವರು ಹೇಳಿದರು.




BREAKING NEWS
Loading latest news...
Join our WhatsApp Channel Powered By : Online Pudu